ಅಂಕೋಲಾ: ಬದುಕಿರುವಷ್ಟು ಕಾಲ ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ಮಾಡಿ ಜನರ ಹೃದಯದಲ್ಲಿ ನೆಲೆಯಾದವರೇ ನಿಜವಾದ ಶ್ರೀಮಮತರು ಎಂದು ಸಾಹಿತಿ ಡಾ.ಜಯಂತ ಕಾಯ್ಕಿಣಿ ಹೇಳಿದರು.
ಅವರು ಶೆಟಗೇರಿಯ ದಿ.ನಾರಾಯಣ ಬಿ ನಾಯಕ ಸಂಸ್ಮರಣೆ ಹಾಗೂ ಪರಿಪೂರ್ಣ ನಾರಾಯಣ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು. ನಾರಾಯಣ ನಾಯಕರು ಮಾಡಿದ ಕೆಲಸ-ಕಾರ್ಯಗಳನ್ನು, ಅವರು ಕಲಿಸಿದ ಜೀವನ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಮುಂದುವರೆಸಿಕೊಂಡು ಹೋಗಬೇಕು. ನಾರಾಯಣ ನಾಯಕರು ಅಧ್ಯಾತ್ಮದ ಜೊತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿ ಅಹಂಕಾರ ಇಲ್ಲದೆಡೆ ಅಧ್ಯಾತ್ಮವಿರುತ್ತದೆ ಎನ್ನುವದಕ್ಕೆ ಉದಾಹರಣೆಯಾದವರು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಶಾಸಕ ಸತೀಶ ಸೈಲ್ ಮಾತನಾಡಿ ದಿ.ನಾರಾಯಣ ನಾಯಕರ ವಯಸ್ಸಿಗೆ ಮೀರಿದ ಸ್ನೇಹ ಹಾಗೂ ಊಹೆಗೂ ನಿಲುಕದ ಸಮಾಜ ಸೇವೆಯಿಂದ ನಾರಾಯಣ ನಾಯಕರು ಎಂದಿಗೂ ಜನಮಾನಸದಲ್ಲಿ ಇರುತ್ತಾರೆ. ಶೆಟಗೇರಿಯಂತಹ ಹಳ್ಳಿಯೊಂದರಲ್ಲಿ ಧಾರ್ಮಿಕ ಮತ್ತು ಸಾಂಸ್ಕ್ರತಿಕ ವೈಭವವನ್ನು ತಂದುಕೊಟ್ಟವರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರಾವಳಿ ದಿನಪತ್ರಿಕೆಯ ಸಂಪಾದಕ ಗಂಗಾಧರ ಹಿರೇಗುತ್ತಿ ಮಾತನಾಡಿ ಒಬ್ಬ ಮನುಷ್ಯನಾಗಿ ಮಾಡಿದ ಸೇವಾ ಕಾರ್ಯಗಳು ಜೀವನದಲ್ಲಿ ಸಾರ್ಥಕತೆಯನ್ನು ನೀಡುತ್ತದೆ. ನಾರಾಯಣ ನಾಯಕರು ಸಾಂಸ್ಕ್ರತಿಕವಾಗಿ ಎಲ್ಲರನ್ನು ಒಂದುಗೂಡಿಸಿದ್ದಾರೆ. ತನ್ನ ಬದುಕನ್ನು ಎಲ್ಲ ರಂಗದಲ್ಲೂ ಹಂಚಿಕೊಂಡಂತಹ ಮಹಾನ್ ವ್ಯಕ್ತಿತ್ವದಿಂದಾಗಿ ಬಹಳ ಕಾಲ ಜನರ ಮನಸಿನಲ್ಲಿ ಇರುತ್ತಾರೆ ಎಂದರು.
ಈ ಸಂದರ್ಭದಲ್ಲಿ ಪರಿಪೂರ್ಣ ನಾರಾಯಣ ಸಂಸ್ಮರಣಾ ಗ್ರಂಥದ ಸಂಪಾದಕ ಹುಳಗೋಳ ನಾಗಪತಿ ಹೆಗಡೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಪ್ರದಾಯ ಸೇವಾಸಂಸ್ಥೆಯ ಗೌರವಾಧ್ಯಕ್ಷ ಜ್ಞಾನದೇವ ವಿ ನಾಯಕ, ಆರ್ಟ ಪ್ರಿಂಟ್ ಬೆಂಗಳೂರನ ಅರವಿಂದ ಎನ್ ನಾಯಕ, ಕ.ರಾ.ಸೌಹಾರ್ದ ಸಂಯುಕ್ತ.ಸ.ನಿ ಪ್ರಾಂತೀಯ ವ್ಯವಸ್ಥಾಪಕ ಶ್ರೀಕಾಂತ ಬರುವೆ, ಪರಿಪೂರ್ಣ ನಾರಾಯಣ ಗ್ರಂಥದ ಸಂಚಾಲಕ ರಾಘು ಕಾಕರಮಠ ಉಪಸ್ಥಿತರಿದ್ದರು.
ಸನ್ಮಯ ಭಟ್ ಮತ್ತು ಮಂಜುನಾಥ ಭಟ್ ಯಕ್ಷ ನೃತ್ಯದ ಮೂಲಕ ಸ್ವಾಗತಿಸಿದರು. ಅನೂಪ ನಾರಾಯಣ ನಾಯಕ ಸರ್ವರನ್ನೂ ಸ್ವಾಗತಿಸಿದರು, ರಾಜೇಶ ನಾಯಕ ಪ್ರಾಸ್ತಾವಿಕ ಮಾತನಾಡಿದರು. ಯೋಗೇಶ ಮಿರ್ಜಾನ ಕಾರ್ಯಕ್ರಮ ನಿರೂಪಿಸಿದರು. ಮಂಜೇಶ ನಾಯಕ ವಂದಿಸಿದರು.