ಹೊನ್ನಾವರ: ತಾಲೂಕಿನ ಮಾವಿನಕುರ್ವಾದಲ್ಲಿ ನೆಲೆ ನಿಂತಿರುವ ಗೋಪಾಲಕೃಷ್ಣನ ವನಭೋಜನ ಕಾರ್ಯಕ್ರಮ ಮುಗ್ವಾದ ತನ್ಮಡಗಿಯಲ್ಲಿ ಭಕ್ತಿಪೂರ್ವಕವಾಗಿ ನೆರವೇರಿತು.
ಮಾವಿನಕುರ್ವಾದ ಬಯಲು ಪ್ರದೇಶದಲ್ಲಿ ನೆಲೆ ನಿಂತಿರುವ ಗೋಪಾಲಕನ ಮಹಿಮೆ ಅಪಾರವಾದದು. ಅಂತೇಯೇ ಇಲ್ಲಿ ವೈಕುಂಠ ಚತುರ್ದಶಿ ಸಂಧರ್ಬಗಳಲ್ಲಿ ವರ್ಷಕ್ಕೊಮ್ಮೆ ನಡೆಯುವ ವನಭೋಜನ ಕಾರ್ಯಕ್ರಮ ಇಲ್ಲಿನ ವೀಶೇಷತೆಯಲ್ಲೊಂದಾಗಿದೆ.ಎಲ್ಲಾ ಸಮಾಜದವರು ಸೇರಿ ಈ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾರೆ. ವನಭೋಜನ ನಡೆಯುವ ದಿನದಂದು ಶ್ರೀ ಗೋಪಾಲಕೃಷ್ಣನ ಸನ್ನಿಧಿಯಲ್ಲಿ ಬೆಳಿಗ್ಗೆ ಸ್ಥಳೀಯ ಸೇವೆಯೊಂದಿಗೆ ಆರಂಭವಾಗಿ ಶರಾವತಿ ನದಿಯಲ್ಲಿ ದೋಣಿಯ ಮೇಲೆ ಪಲ್ಲಕ್ಕಿಯಲ್ಲಿ ಗೋಪಾಲಕೃಷ್ಣನ ಮೂರ್ತಿಯನ್ನು ಕುಳ್ಳಿರಿಸಿ ಮುಗ್ವಾ-ಸುಬ್ರಹ್ಮಣ್ಯ ಸಮೀಪದ ತನ್ಮಡಗಿ ವನಕ್ಕೆ ತಂದು ವರ್ಷಂಪ್ರತಿ ನಿರ್ದಿಷ್ಟ ಪಡಿಸಿದ ಸ್ಥಳದಲ್ಲಿ ದೇವರ ವಿಗ್ರಹವನ್ನಿಟ್ಟು, ಗೋಪಾಲಕೃಷ್ಣ ದೇವರ ಮೂರ್ತಿಗೆ ಆಭರಣದಿಂದ ಅಲಂಕಾರಗೊಳಿಸುತ್ತಾರೆ. ಧಾತ್ರಿ ಹವನ, ಮಹಾನೈವೇದ್ಯ, ಮಹಾಮಂಗಳಾರತಿ ಸೇರಿದಂತೆ ವಿಶೇಷಪೂಜೆ ನಡೆಯುತ್ತವೆ.
ಜೊತೆಗೆ ಮಹಾಲಕ್ಷ್ಮೀ ಹಾಗೂ ದತ್ತಾತ್ರೆಯ ದೇವರಿಗೂ ಪೂಜೆ ಸಲ್ಲಿಸಲಾಗುತ್ತದೆ. ಗ್ರಾಮಸ್ಥರೆಲ್ಲರು ಸೇರಿ ವನಭೋಜನಕ್ಕೆ ಬೇಕಾಗುವ ಆಹಾರ ಸಾಮಗ್ರಿಗಳನ್ನು ತಂದು ಕಾಡಿನಲ್ಲಿಯೇ ಭೋಜನ ತಯಾರಿಸುತ್ತಾರೆ. ಈ ಸ್ಥಳದಲ್ಲೆ ನಿರಂತರವಾಗಿ ಹರಿಯುತ್ತಿರುವ ನೀರಿನ ಜರಿಯು ಮತ್ತೊಂದು ವಿಶೇಷತೆಯಾಗಿದೆ. ಈ ನೀರನ್ನು ಭೋಜನ ತಯಾರಿಸಲು ಬಳಸಲಾಗುತ್ತದೆ. ಹೊನ್ನಾವರದ ರಾಮತಿರ್ಥದಿಂದ ಈ ಸ್ಥಳಕ್ಕೆ ನೀರು ಭೂಮಿಯಾಳದಿಂದ ಹರಿದು ಬರುತ್ತದೆ ಎನ್ನುವ ಮಾಹಿತಿ ಇದೆ.
ವನಭೋಜನದ ಕುರಿತು ಭಕ್ತರಾದ ಆನಂದ್ ಭಟ್ ಮಾತನಾಡಿ ಚಾತುರ್ಮಾಸ ಇದೊಂದು ಪರ್ವಕಾಲ, ವನಬೋಜನ ಕಾರ್ಯಕ್ರಮವು ವೈಕುಂಠ ಎಕಾದಶಿಯಂದೇ ಪೂಜೆ ನಡೆಸುವುದು ಇಲ್ಲಿ ಮೊದಲಿನಿಂದಲೂ ನಡೆದು ಬಂದ ಪ್ರತಿತಿಯಾಗಿದೆ. ಶ್ರೀ ದೇವರಲ್ಲಿ ಭಕ್ತಿಯಿಂದ ಬೇಡಿಕೊಂಡಾಗ ನಮ್ಮ ಕಷ್ಟಕಾರ್ಪಣ್ಯಗಳೆಲ್ಲವು ದೂರವಾಗುತ್ತದೆ ಎಂದರು.
ವನಭೋಜನದ ನಂತರ ಸಾಯಂಕಾಲ ಶ್ರೀ ನವದುರ್ಗಾ ಸಂಸ್ಥಾನದಲ್ಲಿ ಭವ್ಯ ಸ್ವಾಗತದೊಂದಿಗೆ ಶ್ರೀ ದೇವರ ಆಗಮನ, ಶ್ರೀ ದೇವರ ಸಮಾಗಮ,ಮಂಗಲಾಷ್ಟಕ ಸೇವೆ ಅಷ್ಟಾವಧಾನ ಸೇವೆ, ಕಾರ್ತಿಕ ದೀಪೋತ್ಸವ, ಮಹಾಮಂಗಲಾರತಿ ಹಾಗೂ ಪ್ರಸಾದ ವಿತರಣೆ ನಡೆಯುತ್ತದೆ. ರಾತ್ರಿ ಶರಾವತಿ ನದಿಯ ತಟದಲ್ಲಿ ಭವ್ಯ ದೀಪಾಲಂಕೃತ ತೆಪ್ಪದಲ್ಲಿ ಶ್ರೀ ದೇವರ ‘ಜಲಕ್ರೀಡೋತ್ಸವ’ ನಡೆಸಲಾಗುತ್ತದೆ. ಹೀಗೆ ವನಭೋಜನ ಕಾರ್ಯಕ್ರಮ ಅದ್ದೂರಿಯಾಗಿ ಜರಗುತ್ತದೆ.