
ಶಿರಸಿ: ನಗರಸಭೆಯಲ್ಲಿ ಯಾವುದೇ ಕಮಿಷನ್ ಎಜೆಂಟ್ ಗಳಿಗೆ ಅವಕಾಶವಿಲ್ಲ. ಸಾರ್ವಜನಿಕರು ಸ್ವತಃ ತಾವೇ ಬಂದು ಕೆಲಸ ಮಾಡಿಕೊಳ್ಳಿ, ಆ ಮೂಲಕ ಸ್ವಚ್ಛ ನಗರಭೆಯನ್ನು ನಾವೆಲ್ಲ ಕೂಡಿ ಮಾಡಬೇಕಾಗಿದೆ ಎಂದು ನಗರಸಭಾ ಅಧ್ಯಕ್ಷ ಗಣಪತಿ ನಾಯ್ಕ ಹೇಳಿದರು.
ಅವರು ಮಂಗಳವಾರ ನಗರದ ವಿನಾಯಕ ಕಾಲೋನಿಯ ವಿನಾಯಕ ದೇವಾಲಯದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಶಿರಸಿ ನಗರಸಭೆಯ ವತಿಯಿಂದ ನಗರದ ಎಲ್ಲ ಭಾಗದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಸಮಯಕ್ಕೆ ಸರಿಯಾಗಿ ಮಾಡಲಾಗುವುದು ಎಂದರು. ಶಿರಸಿ ನಗರಸಭೆಯಿಂದ ನಗರದಲ್ಲಿ ಟೌನ್ ಹಾಲ್ ನಿರ್ಮಾಣ ಮಾಡುವ ವಿಚಾರ ನಮ್ಮಲ್ಲಿದೆ. ಈ ನಿಟ್ಟಿನಲ್ಲಿ ಶಾಸಕರು ಮತ್ತು ಇತರರೊಡನೆ ಚರ್ಚಿಸಿ ಮಾಡಲಾಗುವುದು ಎಂದರು.
ವಿನಾಯಕ ಕಾಲೋನಿ ಭಾಗದ ನಿವಾಸಿ, ಹಿರಿಯ ಸಹಕಾರಿ ಎನ್ ಪಿ ಗಾಂವ್ಕರ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ಥಳೀಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.
ನಗರಸಭೆಯ ಉಪಾಧ್ಯಕ್ಷೆ ವೀಣಾ ಶೆಟ್ಟಿ ಮಾತನಾಡಿ, ನಾವು ಮಾಡಿರುವ ಕೆಲಸಗಳನ್ನು ಗುರುತಿಸಿದಾಗ, ಮತ್ತಷ್ಟು ಕೆಲಸ ಮಾಡುವ ಹುರುಪು ನಮ್ಮಲ್ಲಿ ಮೂಡಿತ್ತದೆ. ಈ ಭಾಗಕ್ಕೆ ಬೇಕಾದ ಅಗತ್ಯ ಸೌಲಭ್ಯವನ್ನು ನೀಡುವುದಾಗಿ ಹೇಳಿದರು.
ವೇದಿಕೆಯಲ್ಲಿ ನಗರಸಭಾ ಸದಸ್ಯ ಆನಂದ ಸಾಲೇರ ಇದ್ದರು. ಹೆಗಡೆ (ಯಮಹಾ) ಏಜೆನ್ಸಿ ಮಾಲೀಕ ಶ್ರೀಪಾದ ಹೆಗಡೆ ವಂದಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿ ಎಸ್ ಪಿ ಶೆಟ್ಟಿ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.