ಹೊನ್ನಾವರ: ತಾಲೂಕಿನಾದ್ಯಂತ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಬ್ಬದ ವ್ಯಾಪಾರಕ್ಕಾಗಿ ಬಂದ ಬೇರೆ ಜಿಲ್ಲೆಯ ಹೂವು ಹಾಗೂ ಕಬ್ಬಿನ ವ್ಯಾಪಾರಿಗಳಿಗೆ ನಿರಾಸೆ ಮೂಡಿಸಿದೆ.
ತುಳಸಿ ಹಬ್ಬದ ನಿಮಿತ್ತ ಪರ ಜಿಲ್ಲೆಯಿಂದ ಇಲ್ಲಿಗೆ ಹೂವು ಹಾಗೂ ಕಬ್ಬಿನ ವ್ಯಾಪಾರಿಗಳಿಗೆ ವರುಣ ತಣ್ಣೀರು ಎರೆಚಿದ್ದಾನೆ. ಕಳೆದ ನಾಲ್ಕೈದು ದಿನಗಳಿಂದ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯಿಂದ ಹಬ್ಬದ ಕಳೆ ಗುಂದಿದೆ. ಮಳೆಗೆ ಗ್ರಾಹಕರು ಮನೆಯಿಂದ ಹೊರಗೆ ಬರುತ್ತಿಲ್ಲ. ಇತ್ತ ಗ್ರಾಹಕರಿಲ್ಲದೆ ವ್ಯಾಪಾರಿಗಳು ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
ತಾವು ತಂದಿರುವ ಹೂವುಗಳನ್ನು ವಾಪಸ್ ಒಯ್ಯಲೂ ಆಗದೆ ಮಾರಾಟ ಮಾಡಲಾಗದೆ ವ್ಯಾಪಾರಿಗಳು ಪರದಾಡುವಂತಾಗಿದೆ. ಮಳೆಯಿಂದ ಹೂವುಗಳು ಹಾಳಾಗುತ್ತಿದೆ. ಒಟ್ಟಿನಲ್ಲಿ ವರುಣ ಹಬ್ಬದ ಸಡಗರಕ್ಕೆ ಅಡ್ಡಿ ಪಡಿಸಿದ್ದಲ್ಲದೆ ಬಡ ವ್ಯಾಪಾರಿಗಳಿಗೂ ನಿರಾಸೆಗೆ ಕಾರಣನಾಗಿದ್ದಾನೆ.
ಪ್ರತಿ ವರ್ಷ ಹಬ್ಬದ ಸಮಯಕ್ಕೆ ನಾವು ಇಲ್ಲಿಗೆ ವ್ಯಾಪಾರಕ್ಕೆಂದು ಬರುತ್ತಿದ್ದೆವು. ಅಧಿಕ ಲಾಭವಲ್ಲದಿದ್ದರೂ ಮನೆಗೆ ಸ್ವಲ್ಪವಾದರೂ ಹಣ ಕೊಂಡೊಯ್ಯುವಷ್ಟು ವ್ಯಾಪಾರವಾಗುತ್ತಿತ್ತು. ಆದರೆ ಈ ಬಾರಿ ಮಳೆಯಿಂದಾಗಿ ಹೂವುಗಳು ಹಾಳಾಗುತ್ತಿವೆ. ಗ್ರಾಹಕರು ಮಾರುಕಟ್ಟೆಗೆ ಬರುತ್ತಿಲ್ಲ. ವಾಹನದ ಖರ್ಚು ಕೂಡ ತೆಗೆಯಲು ಕಷ್ಟವಾಗಿದೆ. ಹಬ್ಬದ ದಿನಗಳಲ್ಲಿ ಮಾತ್ರ ನಮಗೆ ವ್ಯಾಪಾರ ಜೋರಾಗಿರುತ್ತದೆ. – ಬಸವರಾಜಪ್ಪ ಸಿದ್ದಪ್ಪ, ಹೂವಿನ ವ್ಯಾಪಾರಿಗಳು