ಸಿದ್ದಾಪುರ: ತಾಲೂಕಿನ ಅಡಕೆ ವಹಿವಾಟಿನ ಹೆಮ್ಮೆಯ ಸಹಕಾರಿ ಸಂಸ್ಥೆಯಾದ ಟಿಎಂಎಸ್ 2020-21ರಲ್ಲಿ ಒಟ್ಟೂ 167ಕೋಟಿಯಷ್ಟು ವ್ಯವಹಾರ ನಡೆಸಿ 5ಕೋಟಿ77ಲಕ್ಷದ 99ಸಾವಿರದ 950ರೂಗಳಷ್ಟು ನಿವ್ವಳ ಲಾಭಗಳಿಸಿದ್ದು ಸಂಘದ ಶೇರುದಾರ ಸದಸ್ಯರಿಗೆ ಶೇ.10 ಲಾಭಾಂಶ ಹಂಚಲಾಗುವುದು ಎಂದು ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಹೇಳಿದರು.
ಪಟ್ಟಣದ ಟಿಎಂಎಸ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು 74ವರ್ಷದಲ್ಲಿ ಹಲವಾರು ಏಳು-ಬೀಳುಗಳನ್ನು ಸಂಘ ಕಂಡಿದೆ. ಕಳೆದ ಎರಡು ವರ್ಷದಿಂದ ಕರೊನಾ ಸಾಂಕ್ರಮಿಕ ರೋಗದ ಸಂಕ್ರಮಣ ಕಾಲದಲ್ಲಿಯೂ ಸಂಘ ದಾಖಲೆಯ ಲಾಭಗಳಿಸಿದೆ. ಇದಕ್ಕೆ ಸಂಘದ ನಿಷ್ಠಾವಂತ ಸದಸ್ಯರು ಕಾರಣರಾಗಿದ್ದಾರೆ. ಕರೊನಾ ಸಂಕಷ್ಟದಲ್ಲಿದ್ದವರಿಗೆ ಸಂಘ ವಿವಿಧ ರೀತಿಯಲ್ಲಿ ಸಹಕರಿಸಿದೆ.ಎರಡು ತಿಂಗಳುಗಳ ಕಾಲ ತಾಲೂಕು ಸರ್ಕಾರಿ ಆಸ್ಪತ್ರೆಗೆ ಅಂಬುಲೆನ್ಸ್ ಸೇವೆ ನೀಡಿದೆ. ಅಲ್ಲದೇ ಮುಖ್ಯಮಂತ್ರಿ ಪರಿಹಾರ ನಿಧಿಗೆ 5ಲಕ್ಷರೂ ದೇಣಿಗೆ ನೀಡಿದೆ.
ಸಂಘದಲ್ಲಿ 3555 ಸದಸ್ಯರಿದ್ದು ಅವರಿಂದ 3.31ಕೋಟಿ ಶೇರು ಬಂಡವಾಳ ಹೊಂದಿದೆ. ಸಂಚಿತ ನಿಧಿಗಳ ಮೊತ್ತ 34.77ಕೋಟಿಯಷ್ಟು ಇದೆ. 81.49ಕೋಟಿ ಠೇವು ಸಂಗ್ರಹ ಇದ್ದು ದುಡಿಯುವ ಬಂಡವಾಳ 159.34 ಕೋಟಿ ಇದೆ. ಮಾರಾಟ ಮಾಡಿದ ಮಹಸೂಲು ಬೇಲೆ 150ಕೋಟಿ 12ಲಕ್ಷದ 68ಸಾವಿರದ 730ರೂಗಳಾಗಿದೆ. ರೈತರ ಅನುಕೂಲಕ್ಕಾಗಿ ಸಂಘ ಕೇಂದ್ರ ಕಚೇರಿಯ ಪಕ್ಕದಲ್ಲಿ(ಸಿದ್ದಾಪುರ) ದವಸಧಾನ್ಯ ಉಪವಿಭಾಗ ಹೊಂದಿದೆ. ಸಂಘದಲ್ಲಿ ಹಸಿ ಅಡಕೆ ಟೆಂಡರ್ ಪ್ರಾರಂಭಿಸಿ ಸದಸ್ಯರಿಗೆ ಅನುಕೂಲಮಾಡಿಕೊಟ್ಟಿದೆ. ಕಾನಸೂರು ಶಾಖೆಯಲ್ಲಿಯೂ ಪ್ರಾರಂಭಿಸಲಾಗುತ್ತಿದೆ. ಸದಸ್ಯರ ವ್ಯವಹಾರಿಕ ಅನುಕೂಲಕ್ಕಾಗಿ ನೆಪ್ಟ್/ಆರ್ಟಿಜಿಎಸ್ ವ್ಯವಸ್ಥೆ ಮಾಡಲಾಗಿದೆ. ಸಂಘದ ಸದಸ್ಯರಿಗಾಗಿ ಹಳ್ಳಿಯವರೆಗೂ ಅಧುನಿಕ ನೆಟ್ವರ್ಕ ಸೇವೆ ನೀಡಬೇಕೆನ್ನುವ ಉದ್ದೇಶದಿಂದ ನೆಟ್ವರ್ಕ ಮಾರ್ಕೆಟಿಂಗ್ನ್ನು ಆರಂಭಿಸಲಾಗುತ್ತಿದೆ. ಅಲ್ಲದೇ ಸಂಘದ 40 ಹಿರಿಯ ಸದಸ್ಯರನ್ನು ಸಹಕಾರಿ ಸಭೆಯಲ್ಲಿ ಹಾಗೂ ಸರ್ವ ಸಾಧಾರಣ ಸಭೆಯಲ್ಲಿ ಸನ್ಮಾನಿಸಲಾಗುತ್ತದೆ.
ಕ್ಷೇಮ ನಿಧಿ ಯೋಜನೆ: ಸಂಘದ ಸದಸ್ಯರ ಆರೋಗ್ಯದ ಸಲುವಾಗಿ ಕ್ಷೇಮನಿಧಿ ಯೋಜನೆ ಪ್ರಾರಂಭಿಸಲಾಗಿದ್ದು ಇದರ ಪ್ರಯೋಜನವನ್ನು ಸದಸ್ಯರು ಪಡೆದುಕೊಳ್ಳಬೇಕು. ಸಂಘದ ಸದಸ್ಯರ ಹಿತದೃಷ್ಠಿಯಿಂದ ಸಾಲದ ಮೇಲೆ ಶೇ.12ರೂಗಳನ್ನು ಪಡೆಯುತ್ತಿದ್ದ ಬಡ್ಡಿಯನ್ನು ಶೇ.11ಕ್ಕೆ ಇಳಿಸಲಾಗಿದೆ. ವಿಶೇಷವಾಗಿ ಸಂಘದ ಸರ್ವಸಾಧಾರಣ ಸಭೆಯಂದು ಸಂಘದ ಲೋಗೋವನ್ನು ಅನಾವರಣಗೊಳಿಸಲಾಗುತ್ತದೆ ಎಂದು ಆರ್.ಎಂ.ಹೆಗಡೆ ಬಾಳೇಸರ ಹೇಳಿದರು.
ಉಪಾಧ್ಯಕ್ಷ ಎಂ.ಜಿ.ನಾಯ್ಕ ಹಾದ್ರಿಮನೆ, ನಿರ್ದೆಶಕರಾದ ಕೆ.ಕೆ.ನಾಯ್ಕ, ಜಿ.ಎಂ.ಭಟ್ಟ , ಸುಲೋಚನಾ ಶಾಸ್ತ್ರಿ, ಇಂದಿರಾ ಭಟ್ಟ, ಸುಬ್ರಾಯ ಹೆಗಡೆ, ಗಣಪತಿ ಕುಡಗುಂದ, ಜಿ.ಆರ್.ಹೆಗಡೆ,ಸಿ.ಎನ್.ಹೆಗಡೆ, ಎಲ್.ಆರ್.ಹೆಗಡೆ, ಎಂ.ಎನ್.ಹೆಗಡೆ, ನಾರಾಯಣ ನಾಯ್ಕ, ಪರಶುರಾಮ ನಾಯ್ಕ, ಸುಬ್ರಹ್ಮಣ್ಯ ಹೆಗಡೆ, ಜಿ.ಪಿ.ಭಟ್ಟ ಕಲ್ಮನೆ ಹಾಗೂ ವ್ಯವಸ್ಥಾಪಕ ಸತೀಶ ಹೆಗಡೆ ಉಪಸ್ಥಿತರಿದ್ದರು.
ವಾರ್ಷಿಕ ಸಭೆ: ಸಂಘದ ಶಿರಸಿ ಶಾಖೆಯಲ್ಲಿ ನ.16ರಂದು ಮಧ್ಯಾಹ್ನ 3.30ಕ್ಕೆ ಹಾಗೂ ಕಾನಸೂರು ಶಾಖೆಯಲ್ಲಿ ನ.18ರಂದು ಸಂಜೆ 5ಕ್ಕೆ ಸಹಕಾರಿ ಸಭೆ ನಡೆಸಲಾಗುತ್ತದೆ. ನ.20ರಂದು ಮಧ್ಯಾಹ್ನ 3ಕ್ಕೆ ಸಿದ್ದಾಪುರದ ವ್ಯಾಪಾರಿ ಅಂಗಣದಲ್ಲಿ ವಾರ್ಷಿಕ ಸರ್ವಸಾಧಾರಣ ಸಭೆ ನಡೆಯಲಿದೆ.