ಶಿರಸಿ: ದಿ ತೋಟಗಾರ್ಸ್ಕೋ-ಆಪರೇಟಿವ್ ಸೇಲ್ ಸೊಸೈಟಿಯ ಹಸಿ ಅಡಿಕೆಟೆಂಡರ್ ವ್ಯವಸ್ಥೆಯನ್ನು ಯಲ್ಲಾಪುರ ನಾಕಾದ ಸನಿಹ ಪಂಚವಟಿ ಹೋಟೆಲ್ ಮುಂಭಾಗದಲ್ಲಿರುವ ಸಂಘದ ಜಾಗದಲ್ಲಿ ಇಂದು ಉದ್ಘಾಟಿಸಲಾಯಿತು.
ಸಂಘದ ಆಡಳಿತ ಮಂಡಳಿಯ ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಇವರು ರಿಬ್ಬನ್ಕತ್ತರಿಸುವ ಮೂಲಕ ಹಸಿ ಅಡಿಕೆ ಟೆಂಡರ್ ವ್ಯವಸ್ಥೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಸಿ.ಎನ್. ಹೆಗಡೆ ಹೂಡ್ಲಮನೆ, ಸೀತಾರಾಮ ಎಮ್. ಹೆಗಡೆ ನೀರ್ನಳ್ಳಿ ಇವರು ಹಾಗೂ ವ್ಯಾಪಾರಸ್ಥರು, ಸದಸ್ಯರುಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.
ಪ್ರತಿ ದಿನ ಹಸಿ ಅಡಿಕೆ ಟೆಂಡರ್: ಹಸಿ ಅಡಿಕೆ ಟೆಂಡರ್ ಪ್ರಕ್ರಿಯೆ ಪ್ರತಿ ದಿನ ನಡೆಸುವ ಮೂಲಕ ಪ್ರತಿ ದಿನ ಮಾರಾಟ ವ್ಯವಸ್ಥೆ ಒದಗಿಸಲಾಗಿದೆ. ರೈತ ಸದಸ್ಯರು ಕೂಲಿ ಕಾರ್ಮಿಕರ ತೊಂದರೆಯಿಂದಾಗಿ ತಾವು ಬೆಳೆದ ಬೆಳೆಯನ್ನು ಫಸಲುಗುತ್ತಿಗೆ ನೀಡುತ್ತಿರುವುದರಿಂದ ಸಂಘದಲ್ಲಿ ಸದಸ್ಯರ ಪತ್ತು ಬೆಳೆಯದೇ ಇರುವುದನ್ನು ಗಮನಿಸಿ ಸಂಘದಿಂದ ಹಸಿ ಅಡಿಕೆ ಟೆಂಡರ್ ವ್ಯವಸ್ಥೆ ಕಲ್ಪಿಸಲಾಗಿದೆ. ರೈತ ಸದಸ್ಯರು ಇದರ ಪ್ರಯೋಜನ ಪಡೆದು ಸಂಘದಲ್ಲಿ ತಮ್ಮ ಪತ್ತನ್ನು ಸ್ಥಿರವಾಗಿಟ್ಟುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.