ಶಿರಸಿ: ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಕಣಕ್ಕೆ ಇಳಿದಿದ್ದೇನೆ ಎಂದು ಶೇಖರ ಗೌಡ ಮಾಲೀ ಪಾಟೀಲ್ ಹೇಳಿದರು.
ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು, ಕನ್ನಡದ ಹಿರಿಮೆ ಗರಿಮೆ ಪ್ರತೀಕವಾದ ಕನ್ನಡ ಸಾಹಿತ್ಯ ಪರಿಷತ್ ನ್ನು ಮುನ್ನಡೆಸಲು ಸಮರ್ಥ ನಾಯಕತ್ವದ ಅವಶ್ಯಕತೆ ಇದೆ. ನಾನು ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ನಾಗಿ ಎರಡು ಅವಧಿ ಮತ್ತು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿಯ ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ ಅನುಭವ ನನಗಿದೆ.
ಅದಲ್ಲದೇ 11 ಕೃತಿ ಗಳನ್ನು ರಚಿಸಿದ್ದೇನೆ. ಕನ್ನಡ ಸಾಹಿತ್ಯ ಪರಿಷತ್ ಭವ್ಯ ಪರಂಪರೆ ಯ ಸಂಸ್ಥೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಕನಸು ನನ್ನದಾಗಿದೆ. ಕನ್ನಡ ವಿಶ್ವ ಭಾಷೆಯಾಗಬೇಕೆಂಬ ಕನಸುಳ್ಳ ನನಗೆ ಮತ ನೀಡಿ ಕನ್ನಡ ನಾಡು ನುಡಿಯ ಸೇವೆ ಮಾಡಲು ಮತದಾರರು ಮತದಾನ ಮೂಲಕ ಅವಕಾಶ ನೀಡಬೇಕು ಎಂದರು.
ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನು ಉತ್ಸವ ಮೂರ್ತಿ ಗಳನ್ನಾಗಿಸದೇ, ವರ್ಷ ವೀಡಿ ಅವರ ಕ್ರಿಯಾಶೀಲತೆಯನ್ನು ಬಳಸಿಕೊಳ್ಳುವಂತೆ ಮಾಡುತ್ತೇವೆ. ಕನ್ನಡ ನಿಧಿ ಪರಿಷತ್ತಿನ ನಿಬಂಧನೆ 38 ಏ ಸ್ಥಾಯಿ ನಿಧಿ ಸ್ಥಾಪನೆ ನನ್ನ ಉದ್ದೇಶವಾಗಿದೆ. ಪ್ರತಿ ವರ್ಷ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಸಾಹಿತ್ಯ ಸಾಂಸ್ಕೃತಿಕ ಸಮಾವೇಶ ನಡೆಸುತ್ತೇವೆ. ಉತ್ತರ ಕರ್ನಾಟಕ ಭಾಗಕ್ಕೆ ಒಂದು ಬಾರಿ ಅವಕಾಶ ಕೊಡಿ ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಸಾಹಿತಿ ಧರಣೇಂದ್ರ ಕುರಕುರಿ , ಆರ್ ಜಿ ಹಳ್ಳಿ ನಾಗರಾಜ್, ಎನ್ ಶಿವಕುಮಾರ್ ಉಪಸ್ಥಿತರಿದ್ದರು.