ಶಿರಸಿ: ರೈತರ ಸಮಸ್ಯೆಗೆ ಸ್ಪಂದಿಸಲು ಜಿಲ್ಲಾ ಪೋಲೀಸ್ ಇಲಾಖೆ ಸದಾ ಸಿದ್ಧವಿದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೆಕರ್ ಹೇಳಿದರು.
ನಗರದ ಟಿಆರ್ಸಿ ಸಭಾಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್, ಟಿಎಸ್ಎಸ್ ಹಾಗು ಟಿಆರ್ಸಿ ಸಹಯೋಗದಲ್ಲಿ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮತನಾಡಿದರು.
ಇತ್ತಿಚಿನ ದಿನದಲ್ಲಿ ಅಡಿಕೆ ಕಳ್ಳತನ ಹೆಚ್ಚಾಗಿದ್ದರ ಕುರಿತು ಮಾಹಿತಿಯಿದೆ. ವಿವಿಧ ಭಾಗದಲ್ಲಿ ಕಳ್ಳತನ ನಡೆಯುತ್ತಿರುವುದು ಜನರಿಗೆ ಪೋಲೀಸ್ ಇಲಾಖೆ ಮೇಲಿನ ನಂಬಿಕೆ ತುಸು ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಗಸ್ತು ತಿರುಗುವುದನ್ನು ಈಗಾಗಲೇ ಹೆಚ್ಚಿಸಲಾಗಿದ್ದು, ಬೀಟ್ ಪೋಲೀಸರಿಗೂ ಜಾಗೃತಿ ನೀಡಲಾಗಿದೆ. ನೈಟ್ ಬೀಟ್ ವ್ಯವಸ್ಥೆಯನ್ನು ಬಿಗಿಗೊಳಿಸಲಾಗುವುದು ಎಂದರು.
ಇನ್ನೊಂದು ವಾರದಲ್ಲಿ ಅಡಿಕೆ ಕಳ್ಳರು ಸೇರಿದಂತೆ ಕಳ್ಳತನದಲ್ಲಿ ಭಾಗಿಯಾದವರ ಪರೇಡ್ ಮಾಡಲಾಗುವುದು. ಜೊತೆಗೆ ಕದ್ದ ಅಡಿಕೆಯನ್ನು ಖರೀದಿಸುವವರನ್ನು ಸಹ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದರು. ಸಹಕಾರಿ ಸಂಸ್ಥೆ ಸಹಕಾರದಲ್ಲಿ ಜನರೇ ಸ್ವತಃ ಗಸ್ತು ತಿರುಗುವ ವ್ಯವಸ್ಥೆ ಮಾಡಿಕೊಂಡರೆ, ಅಂತಹ ಕಾರ್ಯಕ್ಕೆ ಇಲಾಖೆಯೂ ಕೈಜೊಡಿಸುತ್ತದೆ ಹಾಗು ಗುರುತು ಪತ್ರವನ್ನೂ ನೀಡಲಾಗುವುದು ಎಂದರು.
ಕಮ್ಯುನಿಟಿ ಪೊಲೀಸ್, ಜನಸ್ನೇಹಿ ಪೋಲೀಸ್ ಮೂಲಕ ಇಲಾಖೆ ಜನರಿಗೆ ಹತ್ತಿರವಾಗುವ ಪ್ರಯತ್ನ ಮಾಡುತ್ತಿದೆ. ಹಾಗಾಗಿ ಜನರೂ ಸಹ ಇಲಾಖೆಗ ಸಹಕಾರ ನೀಡಬೇಕು ಎಂದರು.
ಸಂವಾದದಲ್ಲಿ ಭಾಗಿಯಾದ ರೈತರು ಮಾತನಾಡಿ, ಅಡಿಕೆ ದರ ಹೆಚ್ಚಿರುವ ಕಾರಣಕ್ಕೆ ಕಳ್ಳತನ ನಡೆಯುತ್ತಿದೆ. ಹಳ್ಳಿಗಳಲ್ಲಿ ಒಬ್ಬಂಟಿ ಮನೆಯಲ್ಲಿ ಹೆಚ್ಚು ವೃದ್ಧರೇ ಇರುವುದರಿಂದ ಸಮಸ್ಯೆ ಆಗುತ್ತಿದೆ ಎಂದರು.
ಬಂದೂಕಿಗೆ ಲೈಸೆನ್ಸ್ ಪಡೆಯುವ ಕಾನೂನನ್ನೂ ಸಹ ಸಡಿಲಿಸಬೇಕೆಂದು ಕೆಲವರು ಆಗ್ರಹಿಸಿದರು. ಬಾರ್ ಗಳಿರುವುದು ಶಿರಸಿ ಪ್ಯಾಟೆಯಲ್ಲಾದರೂ, ಹೆಂಡದ ವ್ಯವಹಾರ ನಡೆಯುವುದು ಹಳ್ಳಿಗಳಲ್ಲಿ ಹೆಚ್ಚಾಗಿದೆ. ಈ ಕುರಿತು ಇಲಾಖೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಡಿಎಸ್ಪಿ ರವಿ ನಾಯಕ ಮಾತನಾಡಿ, ಊರಿನ ಯುವಕರು ಒಗ್ಗೂಡಿ, ತೋಟಗಾವಲು ಮಾಡುವುದು ಉತ್ತಮ. ಸಮಸ್ಯೆ ಆದಲ್ಲಿ 112 ಕ್ಕೆ ಕೂಡಲೇ ಕರೆಮಾಡಲು ಅವಕಾಶವಿದೆ. ಇಲಾಖೆ ಸದಾ ಜನರ ಸೇವೆಗೆ ಸಿದ್ಧವಿದೆ. ಅವಕಾಶವಿದೆಯೆಂದು ರೈತರು ತಮ್ಮ ಬಳಿ ಇರುವ ಬಂದೂಕನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದರು.
ಮುಂಡಗನಮನೆ ಸೊಸೈಟಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಅಡಿಕೆಗೆ ದರ ಜಾಸ್ತಿ ಇರುವುದರಿಂದ ಕಳ್ಳತನ ಹೆಚ್ಚು ನಡೆಯುತ್ತಿದೆ. ಕೇವಲ ಮೇಲಾಧಿಕಾರಿಗಳು ಮಾತ್ರವಲ್ಲದೇ, ಇಲಾಖೆಯ ಪ್ರತಿ ಸಿಬ್ಬಂದಿಯೂ ಜಾಗೃತವಾಗಿರಬೇಕು. ಈ ನಿಟ್ಟಿನಲ್ಲಿ ಸಿಬ್ಬಂದಿಗಳಿಗೂ ಮಾಹಿತಿ ನೀಡುವ ಅವಶ್ಯಕತೆಯಿದೆ ಎಂದರು.
ವೇದಿಕೆಯಲ್ಲಿ ಟಿಎಸ್ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಅಡಿಷನಲ್ ಎಸ್ಪಿ, ಶಿರಸಿ ಸಿಪಿಐ ರಾಮಚಂದ್ರ ನಾಯಕ ಇದ್ದರು. ಸಹಕಾರಿ ಸಂಸ್ಥೆಗಳು ಜೊತೆಯಾಗಿ ರೈತ ಮತ್ತು ಪೋಲೀಸ್ ಇಲಾಖೆ ನಡುವೆ ಮಾಹಿತಿ ಹಂಚಿಕೊಳ್ಳಲು ವೇದಿಕೆ ಕಲ್ಪಿಸಿದ್ದು ಸಾರ್ವಜನಿಕರಿಂದ ಶ್ಲಾಘನೆಗೆ ಒಳಗಾಯಿತು.