ಮುಂಡಗೋಡ: ಜಿಲ್ಲಾ ಮಟ್ಟದ ಕನಕದಾಸ ಜಯಂತಿಯನ್ನು ಪ್ರತಿವರ್ಷ ಆಚರಿಸುವಂತೆ ಈ ವರ್ಷವೂ ಕನಕ ಮೂರ್ತಿ ಎದರುಗಡೆ ಸಭಾ ಕಾರ್ಯಕ್ರಮ ನಡೆಸಬೇಕೆಂದು ಒತ್ತಾಯಿಸಿ ಮಂಗಳವಾರ ತಾಲೂಕು ಕುರುಬು ಸಮಾಜ ಮತ್ತು ತಾಲೂಕು ಕನಕ ಸೇವಾ ಟ್ರಸ್ಟ್ ವತಿಯಿಂದ ತಹಶೀಲ್ದಾರ ಶ್ರೀಧರ ಮುಂದಲಮನಿ ಅವರಿಗೆ ಮನವಿ ಸಲ್ಲಿದರು.
ಅರಣ್ಯ ಇಲಾಖೆಯ ಅಧಿಕಾರಿಗಳು ಕನಕ ಮೂರ್ತಿ ಎದರುಗಡೆ ಸಸಿಯನ್ನು ನೆಟ್ಟು ಆ ಜಾಗವನ್ನು ಸಂಪೂರ್ಣವಾಗಿ ಅರಣ್ಯ ಇಲಾಖೆಯ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಜಾಗವು ನಮ್ಮ ಸಮಾಜಕ್ಕೆ ಸಂಬಂಧಪಟ್ಟಿದೆ. ಇದಕ್ಕೆ ಸಂಬಂಧಿಸಿದ ದಾಖಲಾತಿಗಳು ನಮ್ಮಲ್ಲಿ ಇವೆ. ಅಲ್ಲದೇ ಆ ಜಾಗದಲ್ಲಿ ಈಗಾಗಲೇ ಶಾಸಕರ ಅನುದಾನದಡಿಯಲ್ಲಿ ಕನಕ ಭವನವನ್ನು ಕಟ್ಟಲಾಗಿದೆ. ಇಷ್ಟೆಲ್ಲಾ ದಾಖಲಾತಿಗಳಿದ್ದರೂ ಸಹ ಅರಣ್ಯ ಇಲಾಖೆಯವರು ನಮ್ಮದೆಂದು ಸಸಿ ನೆಟ್ಟು ಆ ಜಾಗವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಆದಕಾರಣ ಆ ಜಾಗದಲ್ಲಿರುವ ಸಸಿಗಳನ್ನು ತೆರವುಗೊಳಿಸಿ, ಪ್ರತಿ ವರ್ಷದಂತೆ ಕನಕ ಮೂರ್ತಿಯ ಎದರುಗಡೆ ಜಿಲ್ಲಾ ಮಟ್ಟದ ಕನಕ ಜಯಂತಿಯನ್ನು ಎಲ್ಲರೂ ಸೇರಿ ಅಚರಿಸಲು ಅನುವು ಮಾಡಿಕೊಡಬೇಕು. ಒಂದು ವೇಳೆ ಮೂರ್ತಿಯ ಎದರುಗಡೆ ಕನಕ ಜಯಂತಿ ಕಾರ್ಯಕ್ರಮವನ್ನು ಮಾಡದಿದ್ದಲ್ಲಿ, ಬೇರೆ ಯಾವ ಕಡೆಗೆ ಮಾಡಿದರೂ ಸಹ ಹಾಲುಮತ ಕುರುಬ ಸಮಾಜದ ವಿರೋಧವಿದೆ. ಮತ್ತು ಮುಖಂಡರು ಸಹ ಕಾರ್ಯಕ್ರಮಕ್ಕೆ ಭಾಗವಹಿಸುವುದಿಲ್ಲ ಎಂದು ಅವರು ನೀಡಿದ ಮನವಿಯಲ್ಲಿ ತಿಳಸಿದ್ದಾರೆ.
ಸಮಾಜದ ಮುಖಂಡರಾದ ಪ್ರಕಾಶ್ ಹುದ್ಲಮನಿ, ಪೀರಜ್ಜ ಸಾಗರ, ನಿಂಗಪ್ಪ ಕುರುಬರ, ನಾಗರಾಜ ಗುಬ್ಬಕ್ಕನವರ ಗುಡದಯ್ಯಾ ಕಳಸಗೇರಿ, ನಾಗರಾಜ ಉಪಾದಯ್ಯಾ, ಸಂತೋಷ ಸಣ್ಣಮನಿ, ಶಿವಾನಂದ ಕುರುಬರ, ನಿಂಗಪ್ಪ ಎಸ್ ಕುರುಬರ, ಹನಮಂತಪ್ಪ ಯಲ್ಲಾಪುರ, ಪ್ರವೀಣ ಹುಲಗೂರ, ಎಸ್.ಎಸ್.ಪಾಟೀಲ, ಮಹಾಬಲೇಶ್ವರ ಸಾಗರ ಮತ್ತು ಗೌರೀಶ ಎಚ್ ಮುಂತಾದವರು ಉಪಸ್ಥಿತರಿದ್ದರು.