ಹಳಿಯಾಳ: ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರ ಮೇಲೆ ಗ್ರಾಮದ ಸಾರ್ವಜನಿಕರಿಂದ ಬಂದ ದೂರುಗಳನ್ನು ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಉಪಸ್ಥಿತಿಯಲ್ಲಿ ಪರಿಶೀಲನೆ ಮಾಡಲು ನಿಗದಿಯಾಗಿದ್ದ ಸಭೆಗೆ ವಿಚಾರಣಾ ಅಧಿಕಾರಿಗಳಾದ ಜೋಯಿಡಾ ತಾಲೂಕಾ ಹಿಂದೂಳಿದ ವರ್ಗಗಳ ಕಲ್ಯಾಣಾಧಿಕಾಗಳು ಸಮಯಕ್ಕೆ ಸರಿಯಾಗಿ ಹಾಜರಾಗದ ಕಾರಣ ಸಭೆಗೆ ಬಂದ ಸಾರ್ವಜನಿಕರು ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಂದಿಗದ್ದಾ ಗ್ರಾಮ ಪಂಚಾಯತ ಅಧ್ಯಕ್ಷರ ಮೇಲಿನ ಗ್ರಾಮಸ್ಥರ ಆರೋಪ ಮತ್ತು ಗ್ರಾಮ ಪಂಚಾಯತ ವ್ಯಾಪ್ತಿಯ ಕಾಮಗಾರಿಗಳ ಕುರಿತ ಜನರ ಆರೋಪಗಳ ವಿಚಾರಣೆಗೆ ಇಂದು ಬೆಳಿಗ್ಗೆ 10 ಘಂಟೆಗೆ ಸಭೆ ಕರೆಯಲಾಗಿತ್ತು. ಸಭೆಗೆ 35 ಕ್ಕೂ ಹೆಚ್ಚಿನ ದೂರುದಾರರು ಹಾಜರಾಗಿದ್ದರು. ಆದರೆ, ಪರಿಶೀಲನಾ ಅಧಿಕಾರಿಗಳಾದ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಭೆಗೆ ಹಾಜರಾಗದ ಕಾರಣ ಜನರು ಎರಡು ಗಂಟೆಗಳ ಕಾಲ ಕಾದರು.
ಗ್ರಾಮ ಪಂಚಾಯತ ಪಿಡಿಓ ಬಳಿ ಸಭೆ ಸರಿಯಾದ ಸಮಯಕ್ಕೆ ನಡೆಯಬೇಕು. ಇಲ್ಲಿ ನಾವು ಬಂದು ಕಾಯಲು ಆಗುವುದಿಲ್ಲ, ಸಭೆ ಇದೆ ಎಂದು ನಾಲ್ಕು ದಿನ ಮೊದಲೇ ತಿಳಿಸಬೇಕು, ಇವತ್ತು ನಡೆಯಬೇಕಿದ್ದ ಸಭೆಗೆ ಹಿಂದಿನ ದಿನ ನೋಟಿಸ್ ನೀಡಿದ್ದಿರಿ, ಕೆಲ ದೂರುದಾರರಿಗೆ ಬೆಳಗಿನ ಜಾವ ನೋಟಿಸ್ ನೀಡಲಾಗಿದೆ, ಮುಂದಿನ ಸಭೆಗೆ ಸರಿಯಾಗಿ, ಜವಾಬ್ದಾರಿಯುತವಾಗಿ ನಮಗೆ ಉತ್ತರ ನೀಡುವ ಅಧಿಕಾರಿಗಳ ಜೊತೆ ಸಭೆ ನಡೆಸಬೇಕೆಂದು ದೂರುದಾರ ಶ್ರೀಧರ ಭಾಗ್ವತ್ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಧವಳೋ ಸಾವರಕರ, ಸದಾಶಿವ ದೇಸಾಯಿ, ಗಣಪತಿ ದಬ್ಗಾರ, ತಿಮ್ಮಪ್ಪ ದೇಸಾಯಿ, ಸುಬ್ರಾಯ ದಬ್ಗಾರ, ಟಿ. ಕೆ. ದೇಸಾಯಿ, ಸುದರ್ಶನ ಭಾಗ್ವತ್, ಹರೀಶ್ ಭಟ್ಟ, ಬಾಬ್ಲಿ ಕುಟ್ಟಿಕರ, ಶ್ರೀನಾಥ್ ದೇಸಾಯಿ, ಶ್ರೀಪಾದ ದೇಸಾಯಿ, ಸೋಮಣ್ಣ ಕೆ ಇತರರು ಉಪಸ್ಥಿತರಿದ್ದರು.