ಶಿರಸಿ: ಅತಿವೃಷ್ಟಿಯಿಂದ ಕಂಗಾಲಾದ ಕುಟುಂಬಗಳಿಗೆ ನೆರವಿನ ಸಾಂತ್ವನ ಅಭಿಯಾನಕ್ಕೆ ಕೈ ಜೋಡಿಸಿದ ದಾನಿಗಳಿಗೆ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಪರವಾಗಿ ವ್ಯವಸ್ಥಾಪಕ ಎಸ್.ಎನ್.ಗಾಂವಕರ್ ಬೆಳ್ಳಿಪಾಲ್ ಕೃತಜ್ಞತೆ ಸಲ್ಲಿಸಿದ್ದಾರೆ.
ಕಳೆದ ಜುಲೈ 22 ಮತ್ತು 23ರಂದು ಸಂಭವಿಸಿದ ಅತಿವೃಷ್ಟಿಯಿಂದ ಸಂತ್ರಸ್ತರಾದ ಕುಟುಂಬಗಳಿಗೆ ನೆರವಾಗಲು ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ ಆಶಯದಂತೆ ಮಠ ನೆರವಿಗೆ ಕೈ ಜೋಡಿಸಿ ಎಂಬ ಅಭಿಯಾನ ನಡೆಸಿತ್ತು. ಈ ಅಭಿಯಾನದಲ್ಲಿ ಸಾರ್ವಜನಿಕರು, ಶಿಷ್ಯರು, ಹಾಗೂ ವಿವಿಧ ಹಂತದ ಸಹಕಾರಿ ಸಂಘಗಳು ಆರ್ಥಿಕ ಸಹಾಯ ನೀಡಿದ್ದರು. ಈ ಅಭಿಯಾನದಲ್ಲಿ ರಾಜ್ಯ, ಹೊರ ರಾಜ್ಯ, ದೇಶಗಳಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದವು. ಸಂಗ್ರಹಣೆಗೊಂಡ 26,05,472ರೂ.ಗಳನ್ನು ಹಾನಿಯ ಪರಿಣಾಮ ಗಮನಿಸಿ ಸ್ವತಃ ಶ್ರೀಗಳೇ ಪರಹಾರದ ಚೆಕ್ ವಿತರಿಸಿ ಮಾನಸಿಕ, ಆರ್ಥಿಕ ಸಾಂತ್ವನ ನೀಡಿದ್ದು ವಿಶೇಷವಾಗಿದೆ ಎಂದು ಬೆಳ್ಳೀಪಾಲ್ ತಿಳಿಸಿದ್ದಾರೆ.
ಈ ನೆರೆ ಹಾನಿ ಪರಿಹಾರ ನಿಧಿಗೆ ಸ್ವತಃ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದಿಂದ 11,45,415 ರೂ., ದಾನಿಗಳು ಹಾಗೂ ಮಠದ ಶಿಷ್ಯರಿಂದ 8,24,057 ರೂ., ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೋಯಿಡಾ ಭಾಗದಿಂದ 3.66ಲ.ರೂ, ಟಿ,ಎಂ,ಎಸ್. ಯಲ್ಲಾಪುರ 2 ಲ.ರೂ, ಟಿ,ಎಂ,ಎಸ್. ಶಿರಸಿ 50 ಸಾ.ರೂ., ಟಿಎಸ್ಎಸ್ ಶಿರಸಿ 20 ಸಾ.ರೂ. ನೆರವು ಹರಿದು ಬಂದಿತ್ತು.
ಸ್ವರ್ಣವಲ್ಲೀ ಸಂಸ್ಥಾನ ನೊಂದ 185 ಸಂತ್ರಸ್ತ ಜನರಿಗೆ ಚೆಕ್ ಮೂಲಕ ಹಣ ವಿತರಣೆ ಮಾಡಲಾಗಿದೆ. ಈವರೆಗೆ ವಿತರಿಸಿದ ಒಟ್ಟು ಪರಿಹಾರ ಹಣ 24.75 ಲ.ರೂ. ಆಗಿದೆ. ಶ್ರೀಮಠದಿಂದ ವೈದ್ಯರನ್ನು ಕಳಿಸಿದ್ದು, ಔಷಧ, ಆಹಾರ ಧಾನ್ಯ, ತರಕಾರಿ, ಬಟ್ಟೆ ಒದಗಿಸಿದ್ದು 1,30,472 ರೂ. ಆಗಿದೆ. ಸಂಗ್ರಹಣೆಗೊಂಡ ಹಣಗಳ ಸಮರ್ಪಕವಾಗಿ ಶ್ರೀಗಳ ಮಾರ್ಗದರ್ಶನದಲ್ಲಿ ನೀಡಲಾಗಿದೆ. ಸಹಕಾರಿ ಸಂಘಗಳು ಹಾಗೂ ಎಲ್ಲ ದಾನಿಗಳಿಗೆ, ತತ್ಕಾಲದಲ್ಲಿ ಬಂದು ಸಹಕರಿಸಿದ ಎಲ್ಲ ವೈದ್ಯರಿಗೆ, ಔಷಧಗಳ ವ್ಯವಸ್ಥೆ ಮಾಡಿದ ಶಿರಸಿಯ ಡಾ. ಜಿ.ಎಮ್.ಹೆಗಡೆ ಅವರಿಗೆ, ಶ್ರಮವಹಿಸಿ ಸಹಕರಿಸಿದ ಎಲ್ಲ ಕಾರ್ಯಕರ್ತರಿಗೆ ಮಠದಿಂದ ಕೃತಜ್ಞತೆ ಸಲ್ಲಿಸುವದಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.