ಯಲ್ಲಾಪುರ: ಗ್ರಾಮಸ್ಥರ ಶ್ರದ್ಧೆ-ಭಕ್ತಿಯಿಂದ ಇಂತಹ ಒಂದು ಸುಂದರವಾದ ದೇವಸ್ಥಾನ ರೂಪುಗೊಂಡಿದೆ. ಯಾವದೇ ಕೆಲಸವನ್ನು ಶ್ರದ್ಧೆ ಭಕ್ತಿಯಿಂದ ಮಾಡಿದರೆ ಬೇಗ ಹಾಗೂ ಚೆನ್ನಾಗಿಯೂ ಆಗುತ್ತದೆ. ಕೇವಲ ದೇವರ ಕೆಲಸ ಮಾತ್ರವಲ್ಲ ಕೃಷಿ, ಉದ್ಯೋಗವನ್ನು ಹೀಗೆ ಅನುಸರಿಸಿದರೆ ಯಶಸ್ಸು ತಾನಾಗಿಯೇ ಒಲಿಯುತ್ತದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೆಂದ್ರ ಸ್ವಾಮೀಜಿ ನುಡಿದರು.
ಅವರು ಸೋಮವಾರ ಸಂಜೆ ತಾಲೂಕಿನ ಮಾವಳ್ಳಿಯ ಕನ್ನಡಗಲ್ ಗ್ರಾಮದಲ್ಲಿ ಗ್ರಾಮದೇವಿಯ ನೂತನ ಕಟ್ಟಡದ ಕಳಸಾರೋಹಣ ಹಾಗೂ ಪರಿವಾರ ದೇವರುಗಳಾದ ಈಶ್ವರ, ನಾಗದೇವರ ಪ್ರತಿಷ್ಠಾಪನಾ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು ಇಲ್ಲಿಯ ಅನೇಕ ಜನರು ಶ್ರೀ ಮಠದ ಭಕ್ತರಾಗಿದ್ದು ಅದರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದಾರೆ. ಅದರಂತೆ ಇದೀಗ ಭಗವದ್ಗೀತಾ ಅಭಿಯಾನ ಆರಂಭವಾಗಿದ್ದು, ಈ ದೇವಸ್ಥಾನದಲ್ಲಿ ಡಿ.14ರಂದು ಭಗವದ್ಗೀತಾ ಜಯಂತಿ ಆಚರಣೆ ಯಿಂದ ನಿರಂತರ ಅಭಿಯಾನ ಮುಂದುವರೆಯಲಿ ಎಂಬ ಆಶಯ ವ್ಯಕ್ತಪಡಿಸಿದರಲ್ಲದೇ ಇಂತಹ ಸುಂದರ ದೇವಸ್ಥಾನ ನೋಡಿ ತುಂಬ ಸಂತಸವಾಗಿದೆ ಉತ್ಸವಗಳು ನಿರಂತರವಾಗಿ ನಡೆಯಲಿ ಎಂದರು.
ಇದಕ್ಕೂ ಮುನ್ನ ವಿದ್ವಾನ್ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ನೇತ್ರತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿ ಸ್ವಾಮಿಜಿಯವರನ್ನು ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಪ್ರಮುಖರಾದ ಗುರುಪಾದಯ್ಯಾ ನಂದೋಳ್ಳಿಮಠ, ತಾಲೂಕಾ ಪಂಚಾಯತ ಮಾಜಿ ಅಧ್ಯಕ್ಷ ರವಿ ಕೈಟ್ಕರ್, ಗ್ರಾಮ ಪಂಚಾಯತಿ ಅಧ್ಯಕ್ಷ ಮಹೇಶ ಕಾಸರಕರ್ , ಸದಸ್ಯೆ ಸುನಂದಾ ಮರಾಠೆ, ಸಿದ್ದಾರ್ಥ ನಂದೋಳ್ಳಿ ಮಠ, ಗಣಪತಿ ಮರಾಠಿ, ಶೇಷಗಿರಿ ಹೆಗಡೆ, ಬುದ್ಧ ಮರಾಠೀ, ಸತೀಶ ಮರಾಠಿ ಸೇರಿದಂತೆ ಗ್ರಾಮಸ್ಥರೆಲ್ಲರೂ ಇದ್ದರು.
ಮಾವಳ್ಳಿ ಕನ್ನಡಗಲ್ ಗ್ರಾಮದೇವಿ ದೇವಸ್ಥಾನ ನೂತನ ಕಟ್ಟಡದ ಕಳಶಾರೋಹನಾ, ಪ್ರತಿಷ್ಠಾಪನಾ ಕಾರ್ಯಕ್ರಮದ ನಿಮಿತ್ತ ಕಳೆದೆರಡು ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಸಂಸದ ಅನಂತ ಕುಮಾರ ಹೆಗಡೆ, ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಾಕರರಾಸಾ ಅಧ್ಯಕ್ಷ ವಿ.ಎಸ್ ಪಾಟೀಲ ಮುಂತಾದವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.