ಶಿರಸಿ: ಸಹಕಾರಿ ಕ್ಷೇತ್ರ ಕೃಷಿಕರಲ್ಲಿ ಆರ್ಥಿಕ ಶಿಸ್ತು ಬೆಳೆಸುವ ಮೂಲಕ ಅತ್ಯುತ್ತಮ ಕಾರ್ಯ ಮಾಡುತ್ತಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ನಗರದ ಮಾರ್ಕೆಟ್ ಯಾರ್ಡ್ನ ಟಿಆರ್ಸಿ ಸಭಾಭವನದಲ್ಲಿ ಸಹಕಾರ ಭಾರತಿ ವತಿಯಿಂದ ಸೋಮವಾರ ಆಯೋಜಿಸಲಾದ ಜಿಲ್ಲಾ ಅಭ್ಯಾಸ ವರ್ಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯ ಸರಕಾರದಲ್ಲಿಯೂ ಅದಕ್ಕೆ ಪ್ರಾಮುಖ್ಯತೆ ದೊರೆತಿದೆ. ಸಹಕಾರಿ ಕ್ಷೇತ್ರದ ದೃಷ್ಟಿಕೋನ ಸರಕಾರಿ ಕಾಯಿದೆ ಕಾನೂನಿಗೆ ಸೀಮಿತವಾಗದೇ ಸಾಮಾಜಿಕ ರಾಷ್ಟ್ರೀಯ ಜವಾಬ್ದಾರಿಯಂಥ ವಿಶಾಲತೆಯನ್ನು ಬೆಳೆಸುವುದಕ್ಕೆ ಇಂಥ ಅಭ್ಯಾಸ ವರ್ಗಗಳು ಅನುಕೂಲವಾಗುತ್ತವೆ. ಸಹಕಾರ ಕ್ಷೇತ್ರದ ದೃಷ್ಟಿಕೋನವನ್ನು ಸ್ಪಷ್ಟ ಪಡಿಸುವುದಕ್ಕಾಗಿ ಸಹಕಾರ ಭಾರತಿ ಕಳೆದ 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ ಎಂದರು. ಇತ್ತೀಚಿನ ದಿನಗಳಲ್ಲಿ ನಮ್ಮ ಜಿಲ್ಲೆಯ ಸಹಕಾರಿ ಕ್ಷೇತ್ರವನ್ನು ಬೇರೆಯವರು ಗುರುತಿಸುವ ಮಟ್ಟಿಗೆ ಪರಿಣಾಮಕಾರಿ ಕೆಲಸ ಮಾಡುತ್ತಿದ್ದಾರೆ ಎಂದರು.
ನಾವು ಮಾಡುವ ಕೆಲಸದಲ್ಲಿ ನಾವು ದೇಶಕ್ಕಾಗಿ ಮಾಡುತ್ತಿದ್ದೇವೆ ಎನ್ನುವ ವಿಶಾಲ ದೃಷ್ಟಿಕೋನ ಬೆಳೆಯಬೇಕು. ರಾಷ್ಟ್ರೀಯ ವಿಚಾರದ ಅಡಿಯಲ್ಲಿ ಕೆಲಸ ಮಾಡಬೇಕು. ಸಾಮಾಜಿಕ ಮತ್ತು ರಾಷ್ಟ್ರೀಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು. ಸಹಕಾರ ಭಾರತಿಯ ಅಡಿಯಲ್ಲಿ ಮಾಡುತ್ತಿರುವ ಕೆಲಸ ಭದ್ರ ರಾಷ್ಟ್ರ ನಿರ್ಮಾಣದ ಅಡಿಗಲ್ಲನ್ನು ಭದ್ರ ಪಡಿಸುತ್ತಿದ್ದೇವೆ ಎನ್ನುವ ಭಾವನೆ ನಮ್ಮಲ್ಲಿ ಬೆಳೆಯಬೇಕು. ಸಹಕಾರಿ ಕ್ಷೇತ್ರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದರು.
ಸಹಕಾರ ಭಾರತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೃಷ್ಣಾ ರೆಡ್ಡಿ, ರಾಜ್ಯದಲ್ಲಿಯೇ ಅತ್ಯುತ್ತಮ ಸಹಕಾರಿ ಚಳುವಳಿ ಉತ್ತರಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿದೆ. ಚಿದಂಬರಂ ಹಣಕಾಸು ಮಂತ್ರಿಯಾದ ಸಂದರ್ಭದಲ್ಲಿ ಸಹಕಾರಿ ಕ್ಷೇತ್ರಕ್ಕೆ ತೆರಿಗೆ ವಿಧಿಸಲಾಯಿತು. ಇದರ ತೊಂದರೆಯ ಬಗ್ಗೆ ಅಮಿತ್ ಶಾ ಅವರ ಗಮನಕ್ಕೆ ತರಲಾಗಿದೆ ಸಧ್ಯದಲ್ಲಿಯೇ ಈ ತೊಂದರೆಗೆ ಪರಿಹಾರ ದೊರಕಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಕಾರ ಭಾರತಿಯ ರಾಷ್ಟ್ರೀಯ ಅಧ್ಯಕ್ಷ ರಮೇಶ ವೈದ್ಯ, ರಾಷ್ಟ್ರದ ಉನ್ನತಿಗೆ ಸಹಕಾರ ಭಾರತಿ ಸ್ಥಾಪಿಸಲಾಯಿತು. ದೇಶದ 600 ಜಿಲ್ಲೆಗಳಲ್ಲಿನ 29 ರಾಜ್ಯಗಳಲ್ಲಿ ಸಹಕಾರ ಭಾರತಿ ವ್ಯಾಪಿಸಿದೆ ಎಂದರು.
ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಮೋಹನದಾಸ್ ನಾಯಕ ಸ್ವಾಗತಿಸಿದರು. ಜಿ.ಆರ್ ಹೆಗಡೆ ಯಡಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಸಂಘಟನೆಯ ರಾಜ್ಯ ಸದಸ್ಯ ಶಂಭುಲಿಂಗ ಹೆಗಡೆ ನಿಡಗೋಡು, ರಾಜ್ಯ ಕಾರ್ಯದರ್ಶಿ ಮುಂಜುನಾಥ ಬಿ.ಆರ್, ಸಂಯುಕ್ತ ಸೌಹಾರ್ದ ಒಕ್ಕೂಟದ ನಿರ್ದೇಶಕಿ ಸರಸ್ವತಿ ಎನ್ ರವಿ ಇದ್ದರು.