ಕಾರವಾರ: ಟೋಲ್ ಶುಲ್ಕ ವಿನಾಯಿತಿ, ಕೆಲವೆಡೆ ಅಂಡರ್ ಪಾಸ್, ಬಸ್ ನಿಲ್ದಾಣಗಳು ಹೀಗೆ ಚತುಷ್ಪಥ ಹೆದ್ದಾರಿಯಲ್ಲಿ ವಿವಿಧ ಸೌಲಭ್ಯಗಳನ್ನು ಕಲ್ಪಿಸುವಂತೆ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್.ನಾಯ್ಕ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರ ಅವರನ್ನು ವಿನಂತಿಸಿರುವುದಾಗಿ ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ.
ಗೋವಾಕ್ಕೆ ಆಗಮಿಸಿದ್ದ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾದ ಶಾಸಕರು ಕ್ಷೇತ್ರದಲ್ಲಿನ ಹೆದ್ದಾರಿ ಸಮಸ್ಯೆಗಳ ಬಗ್ಗೆ ವಿವರಿಸಿ, ಮನವಿ ನೀಡಿದರು. ತಮ್ಮವಿಧಾನಸಭಾ ಕ್ಷೇತ್ರದಲ್ಲಿ ಗೋವಾ ಗಡಿ ಮಾಜಾಳಿಯಿಂದ ಮಾದನಗೇರಿ ತನಕ ಚತುಷ್ಪಥ ಹೆದ್ದಾರಿ ಹಾದುಹೋಗುತ್ತಿದ್ದು, ಸ್ಥಳೀಯ ಜನತೆ, ಪ್ರಯಾಣಿಕರು ಹಾಗೂ ವಾಹನ ಸವಾರರಿಗೆ ಅನುಕೂಲಕರ ಸೌಲಭ್ಯ ಕಲ್ಪಿಸಿ, ಸರಾಗ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಶಾಸಕರು, ಸಚಿವರ ಗಮನ ಸೆಳೆದಿದ್ದಾರೆ.
ಟೋಲ್ ಶುಲ್ಕವಿನಾಯತಿ: ಚತುಷ್ಪಥ ಕಾಮಗಾರಿ ಇನ್ನೂ ಮುಕ್ತಾಯವಾಗಿಲ್ಲ. ಅಂಡರ್ ಪಾಸ್ ಗಳು, ಬಸ್ ನಿಲ್ದಾಣಗಳು, ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲಾಗಿಲ್ಲ. ಆದರೂ ಹಟ್ಟಿಕೇರಿ ಬಳಿ ವಾಹನ ಸವಾರರಿಂದ ಶುಲ್ಕ ಆಕರಿಸಲಾಗುತ್ತಿದೆ.
ಚತುಷ್ಪಥ ಹೆದ್ದಾರಿಯಲ್ಲಿ ವಿವಿಧ ಅಗತ್ಯ ಸೌಲಭ್ಯ ಕಲ್ಪಿಸಿ, ಕಾಮಗಾರಿ ಸಂಪೂರ್ಣ ಮುಕ್ತಾಯಗೊಳ್ಳುವವರೆಗೆ ಟೋಲ್ ಶುಲ್ಕ ಆಕರಣೆಯಿಂದ ವಿನಾಯಿತಿ ನೀಡಬೇಕು ಎಂದು ಶಾಸಕಿ ರೂಪಾಲಿ ಎಸ್.ನಾಯ್ಕ ಸಚಿವ ಗಡ್ಕರಿ ಅವರನ್ನು ಆಗ್ರಹಿಸಿದ್ದಾರೆ.