ಕುಮಟಾ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕುಮಟಾ ತಾಲೂಕಾ ಘಟಕಕ್ಕೆ ನಾಮನಿರ್ದೇಶಿತ ಸದಸ್ಯರ ಆಯ್ಕೆ ಮಾಡಲಾಗಿದ್ದು ಹಿರೇಗುತ್ತಿ ಸ.ಹಿ.ಪ್ರಾ.ಶಾಲೆಯಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಕುಮಟಾ ತಾಲೂಕಾ ಸಂಘದ ಅಧ್ಯಕ್ಷ ರವೀಂದ್ರ ಭಟ್ಟ ಸೂರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಭೆ ವಿಳಂಬವಾಗಿ ನಡೆಯುತ್ತಿರುವುದಕ್ಕೆ ಸಕಾರಣವಿದೆ. ಸಂಘದ ಚಟುವಟಿಕೆಗಳು ಯಾವುದೇ ಅಡೆ ತಡೆ ಇಲ್ಲದೇ ನಡೆಯುತ್ತಿದೆ. ನಮ್ಮ ಗುರಿ ಶಿಕ್ಷಕರಿಗೆ ನ್ಯಾಯ ಒದಗಿಸುವುದು. ಆ ಗುರಿ ಮುಟ್ಟುವಲ್ಲಿ ಯಾವ ಅಡೆ ತಡೆ ಬಂದರೂ ಅದನ್ನು ಸಮರ್ಥವಾಗಿ ಎದುರಿಸುತ್ತೇವೆ. ಶಿಕ್ಷಕರು ವಿಘ್ನ ಸಂತೋಷಿಗಳ ಮಾತಿಗೆ ಕಿವಿಗೊಡದೇ ಸಂಘದ ಕರೆಗೆ ಸ್ಪಂದಿಸಬೇಕು. ಶಿಕ್ಷಕರು ಸಂಪೂರ್ಣವಾಗಿ ಸಂಘಕ್ಕೆ ಬೆಂಬಲಿಸಿದಾಗ ಮಾತ್ರ ಬೇಡಿಕೆಗಳನ್ನು ಈಡೇರಿಸುವ ಹೋರಾಟ ಯಶಸ್ವಿಯಾಗಲು ಸಾಧ್ಯ. ಇದನ್ನು ಶಿಕ್ಷಕರು ಮನಗಾಣಬೇಕು. ಶಿಕ್ಷಕರ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸುವ ಸಂಕಲ್ಪದೊಂದಿಗೆ ಇಂದು ನಮ್ಮೊಂದಿಗೆ ನಾಮನಿರ್ದೇಶಿತ ಸದಸ್ಯರಾಗಿ ಸೇರಿಕೊಂಡ ಕ್ರಿಯಾಶೀಲ ಶಿಕ್ಷಕರಿಂದ ಸಂಘ ಮತ್ತಷ್ಟು ಗಟ್ಟಿಯಾಗಿದೆ. ನಿಮ್ಮೆಲ್ಲರ ಸಹಕಾರದಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ಸಾಹದಿಂದ ಕಾರ್ಯನಿರ್ವಹಿಸುತ್ತೇವೆ ಎಂದರು.
ಜಿಲ್ಲಾ ಸಂಘದ ಅಧ್ಯಕ್ಷ ಆನಂದ ಗಾಂವಕರವರು ನಾಮನಿರ್ದೇಶಿತ ಸದಸ್ಯರಿಗೆ ಪ್ರಮಾಣ ಪತ್ರದೊಂದಿಗೆ ಗೌರವ ಸಲ್ಲಿಸಿ ಮಾತನಾಡಿ ಇದು ಶಿಕ್ಷಕರ ಸೇವೆ ಸಲ್ಲಿಸಲು ನಮಗೊಂದು ಅವಕಾಶ. ಇದರ ಸದುಪಯೋಗ ಪಡೆದುಕೊಳ್ಳೋಣ. ಎಲ್ಲಾ ಬೇಧ- ಭಾವ ಮರೆತು ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡೋಣ. ತಾಲೂಕಾ ಸಂಘದ ಎಲ್ಲಾ ಉತ್ತಮ ಕಾರ್ಯಗಳಿಗೆ ಜಿಲ್ಲಾ ಸಂಘದ ಸಂಪೂರ್ಣ ಬೆಂಬಲವಿದೆ ಎಂದರು.
ಸಂಘದ ಉಪಾಧ್ಯಕ್ಷೆ ಶೈಲಾ ಮಡಿವಾಳ ಸಭೆಯಲ್ಲಿ ಉಪಸ್ಥಿತರಿದ್ದು ಸಂಘದ ಕಾರ್ಯಚಟುವಟಿಕೆಗಳನ್ನು ಸಭೆಗೆ ಪರಿಚಯಿಸಿದರು. ಪ್ರಧಾನ ಕಾರ್ಯದರ್ಶಿ ಅನಿಲ್ ದೇಶಭಂಡಾರಿ ವಿಷಯ ಮಂಡನೆಯೊಂದಿಗೆ ಸಭೆಯನ್ನು ನಡೆಸಿಕೊಟ್ಟರು. ಈವರೆಗಿನ ಕಾರ್ಯ ಚಟುವಟಿಕೆಗಳಿಗೆ ಸಭೆಯ ಅನುಮೋದನೆ ಪಡೆದರು.
ಸಂಘದ ಪದಾಧಿಕಾರಿ ಪ್ರಹ್ಲಾದ, ಕಲ್ಪನಾ ನಾಯಕ, ಅಹಲ್ಯಾ ಹೆಗಡೆ, ರಾಜೇಶ್ವರಿ ಹೆಗಡೆ ಉಪಸ್ಥಿತರಿದ್ದರು. ನಾಮನಿರ್ದೇಶಿತ ಸದಸ್ಯರಾಗಿ ಈಶ್ವರ ಭಟ್ಟ, ರಾಜು .ಡಿ.ನಾಯ್ಕ, ಗೋಪಾಲ ಪಟಗಾರ, ಮೊಹಮ್ಮದ್ ಶಫಿ ಮುನ್ನಾ, ರವಿ ನಾಯ್ಕ, ಸುನೀಲ್ ಅಂಬಿಗ, ಜಗನ್ನಾಥ ಮಡಿವಾಳ, ನಾಗರಾಜ ಶೆಟ್ಟಿ, ರಾಜು ನಾಯ್ಕ ಮೇದಿನಿ, ಸುರೇಶ ಭಟ್ಟ ರವರು ಪ್ರಮಾಣ ಪತ್ರ ಸ್ವೀಕರಿಸಿದರು. ವಸಂತ ಶಾನಭಾಗ, ಗೋಪಾಲ ನಾಯ್ಕ ಸಹಕರಿಸಿದರು.