ಶಿರಸಿ: ಕನ್ನಡದ ಮೊದಲ ರಾಜಧಾನಿ ಬನವಾಸಿಯ ಸೊಬಗು ರಾಜ್ಯಾದ್ಯಂತ ದೇಶಾದ್ಯಂತ ಪಸರಿಸಬೇಕು. ಜಗತ್ತಿಗೆ ಕನ್ನಡದ ಕಂಪನ್ನು ಬೀರಿದ ಹೆಮ್ಮೆಯ ಊರು ನಮ್ಮದು. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮ ಮೇಲಿದೆ ಎಂದು ಉದ್ಯಮಿ ಉಪೇಂದ್ರ ಪೈ ಹೇಳಿದರು.
ಅವರು ಕಾನಸೂರಿನ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಹೆಚ್ಚು ಸಾರ್ವಜನಿಕವಾಗಿ ಧಾರ್ಮಿಕವಾಗಿ ಭಾಗವಹಿಸುವುದರಿಂದ ಆರೋಗ್ಯ ವೃದ್ಧಿ ಸುಧಾರಿಸಲು ಸಹಕಾರಿಯಾಗುತ್ತದೆ.
ಕನ್ನಡ ಭಾಷೆಯ ಸೊಗಡನ್ನು ಜಗತ್ತಿಗೆ ಗುರುತಿಸುವಲ್ಲಿ ಪುನೀತ್ ರಾಜ್’ಕುಮಾರ್ ಕೊಡುಗೆ ಅಪಾರ ವಾಗಿದೆ. ಅವರು ಸಾಕಷ್ಟು ಜನಪರ ಕಾರ್ಯಗಳನ್ನು ಮಾಡುತ್ತಿದ್ದರು ಎಂದು ಅವರ ನಿಧನದ ನಂತರವೇ ನಮಗೆ ತಿಳಿದಿದೆ. ನಮ್ಮ ವೈಯಕ್ತಿಕ ಕಾರ್ಯದ ಜೊತೆಗೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡರೆ ಸಮಾಜ ನಮ್ಮನು ಗುರುತಿಸುತ್ತದೆ ಗೌರವಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಉದ್ಯಮಿ ಆರ್ ಜಿ ಶೇಟ್ ಕಾನಸೂರು ರವರಿಗೆ ನಾಗರಿಕ ಸನ್ಮಾನ ಮಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಉದ್ಯಮಿ ಆರ್ ಜಿ ಶೇಟ್ ಕಾನಸೂರು ಕಾನಸೂರಿನ ಪ್ರಾಥಮಿಕ ಶಾಲೆ ಆವರಣದಲ್ಲಿರುವ ವೇದಿಕೆಯನ್ನು ಕನ್ನಡ ರಾಜ್ಯೋತ್ಸವದ ಶುಭ ದಿನದಂದು ಸಿರಿಗನ್ನಡ ವೇದಿಕೆಯಂದು ನಾವು ಘೋಷಣೆ ಮಾಡುತ್ತಿದ್ದೇವೆ. ಕನ್ನಡ ಭಾಷೆಗೆ ನಮ್ಮ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ನಮ್ಮೂರಿನಲ್ಲಿ ಈ ಶುಭ ದಿನದಂದು ಸನ್ಮಾನ ಮಾಡಿರುವುದು ಸಂತಸ ತಂದಿದೆ. ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ವೀರ ಯೋಧರು ಇಂದಿನ ಕಾರ್ಯಕ್ರಮಕ್ಕೆ ಆಗಮಿಸಿರುವುದು ಹೆಮ್ಮೆಯ ಸಂಗತಿ ಎಂದರು.
ನಂತರ ಕದಂಬ ಕಲಾ ವೇದಿಕೆ ಹಾಗೂ ಕೆರೋಕೆ ಸ್ಟುಡಿಯೋ ಶಿರಸಿ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕಾನಸೂರು ಗ್ರಾ.ಪಂ ಅಧ್ಯಕ್ಷ ವೀರಭದ್ರ ಜಂಗಣ್ಣನವರ್, ಉಪಾಧ್ಯಕ್ಷೆ ಶಶಿಪ್ರಭಾ ಹೆಗಡೆ, ಶಶಿಕಾಂತ ನಾಮಧಾರಿ, ಮನೋಜ್ ಶ್ಯಾನುಭೋಗ, ಯೋಧ ಗಣೇಶ ಆಚಾರಿ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಸುಭಾಷ್ ನಾಯ್ಕ, ಸವಿತಾ ಜಯಶೀಲ ಕಾನಡೆ, ರತ್ನಾಕರ ಭಟ್ ಹಾಗೂ ಸಂಘಟಕ ರಾಜು ಕಾನಸೂರು ಉಪಸ್ಥಿತರಿದ್ದರು.