ಶಿರಸಿ: ಇಂದು ಬ್ಯಾಂಕುಗಳ ಸೇವೆ ಜನಸಾಮಾನ್ಯರಿಗೆ ತಲುಪುವಂತಾಗಲಿ. ಕೇವಲ ನಗರಗಳಿಗೆ ಮಾತ್ರವಲ್ಲ. ಗ್ರಾಮೀಣ ಭಾಗದ ಜನರಿಗೂ ಅವುಗಳ ಸೇವೆ ತಲುಪಲಿ. ಆ ಮೂಲಕ ಗಾಂಧೀಜಿಯವರ ಕನಸಿನ ಗ್ರಾಮೀಣ ಭಾರತದ ಅಭಿವೃದ್ದಿ ನನಸಾಗಲಿ. ಈ ದಿಶೆಯಲ್ಲಿ ಎಚ್.ಡಿ.ಎಫ್.ಸಿ ಬ್ಯಾಂಕ ಕಾರ್ಯ ಪ್ರವೃತ್ತವಾಗಲಿ ಎಂದು ಎಂ.ಇ.ಎಸ್. ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಟಿ.ಎಸ್.ಹಳೆಮನೆ ಹೇಳಿದರು.
ಅವರು ಇಂದು ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದು ಬರೀ ಪದವಿ ಪಡೆದರೆ ಸಾಲದು. ಪದವಿ ಜೊತೆಗೆ ಕೌಶಲ್ಯ ಬೇಕು. ಕೌಶಲ್ಯ ಇದ್ದರೆ ಉದ್ಯೋಗ ಸುಲಭವಾಗಿ ದೊರೆಯಲಿದೆ. ಇಲ್ಲದಿದ್ದರೆ ಕಷ್ಟ ಸಾಧ್ಯ. ಈ ಹಿನ್ನಲೆಯಲ್ಲಿ ನಮ್ಮ ಕಾಲೇಜಿನ ಎಂ.ಕಾಂ ವಿಭಾಗದಲ್ಲಿ ಜಿಲ್ಲೆಯ ಯುವಕರಿಗೆ ಅನುಕೂಲವಾಗಲೆಂಬ ಉದ್ದೇಶಕ್ಕೆ ಸ್ಕಿಲ್ ಲ್ಯಾಬ್ ಆರಂಭಿಸಿದ್ದೇವೆ ಎಂದರು.
ಶಿವಮೊಗ್ಗದ ಎಬಿಲಿಟಿ ಪಾಯಿಂಟ್ನ ಮುಖ್ಯಸ್ಥ ವಿನೋದ ಅವರು ಮಾತನಾಡಿ ಯುವ ಜನರು ಉದ್ಯೋಗದಲ್ಲಿ ಶ್ರದ್ದೆ, ಕರ್ತವ್ಯ ನಿಷ್ಠೆ ಹೊಂದಬೇಕು. ಯಾರಿಗೆ ಬದ್ಧತೆ ಇರುತ್ತದೆಯೋ ಅಂತಹವರು ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೇರುತ್ತಾರೆ ಎಂದರು. ಅನುಭವದ ಗುಣಮಟ್ಟ ಉದ್ಯೋಗಾರ್ಥಿಗಳಿಗೆ ಮಹತ್ವದ್ದಾಗಿದೆ ಎಂದು ಹೇಳಿದರು. ಎಂ.ಇ.ಎಸ್. ಆಡಳಿತ ಮಂಡಳಿಯ ಹಿರಿಯ ಸದಸ್ಯ ಆರ್.ಆರ್.ಹೆಗಡೆ ಮಾತನಾಡಿ ಇಂದು ಯುವ ಜನಾಂಗದ ಪ್ರವೃತ್ತಿ ಬದಲಾಗಬೇಕಿದೆ ಎಂದರು. ವಿನಯ ಹೆಗಡೆ ವಂದಿಸಿದರು. ಜಿಲ್ಲೆಯ ನೂರಾರು ಉದ್ಯೋಗಾರ್ಥಿಗಳು ಪಾಲ್ಗೊಂಡಿದ್ದರು.