ಯಲ್ಲಾಪುರ: ವಿವಿಧ ರೈತ ಮತ್ತು ಸಂಘ ಪರಿವಾರದ ಸಂಘಟನೆಗಳ ಸಹಯೋಗದಲ್ಲಿ ತಾಲೂಕಿನ ಕರಡೊಳ್ಳಿಯ ಗೋವರ್ಧನ ಗೋಶಾಲೆಯ ಆವಾರದಲ್ಲಿ ಆಯೋಜನೆಗೊಂಡಿದ್ದ ಭೂಮಿ ಸುಪೋಷಣೆ ಹಾಗೂ ತಾಲೂಕಾ ಸಂರಕ್ಷಣೆ ಅಭಿಯಾನಕ್ಕೆ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಬುಧವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಅವರು, ಭೂಮಿ ಹಾಗೂ ಗೋವು ನಮಗೆಲ್ಲ ತಾಯಿ ಇದ್ದಂತೆ. ಭೂಮಿ ತಾಯಿ ಹಾಗೂ ಗೋಮಾತೆಯನ್ನು ನಿತ್ಯ ಪೂಜಿಸಿ ಆರಾಧಿಸಬೇಕು. ಸಾವಯವ ಪದ್ಧತಿಯ ಕೃಷಿಯನ್ನು ಕೈಗೊಳ್ಳುವುದು ಇಂದಿನ ಅಗತ್ಯವಾಗಿದೆ. ಭೂಮಿ ತನ್ನ ಸತ್ವ ಕಳೆದುಕೊಂಡು ಮುಂದಿನ ಪೀಳಿಗೆಗೆ ಬಂಜರಾಗದಂತೆ ಎಚ್ಚರವಹಿಸಬೇಕು. ಈ ದಿಶೆಯಲ್ಲಿ ಜಾಗೃತಿ ಮಾಡುವ ಈ ಅಭಿಯಾನ ಅವಶ್ಯಕವಾಗಿದೆ ಎಂದ ಶ್ರೀಗಳು ಅದರಂತೆ, ದೇಶಿ ತಳಿಯ ಗೋವುಗಳನ್ನು ಪೋಷಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದರು.
ಶ್ರೀಗಳು ಮೃತ್ತಿಕಾ ಪೂಜನ ಮತ್ತು ಗೋಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಗೋವರ್ಧನ ಗೋಶಾಲೆಯ ಎಂ.ಎನ್.ಭಟ್ ಕವಾಳೆ, ರಾಮಕೃಷ್ಣ ಭಟ್ಟ ಕವಾಳೆ, ಕಾರ್ಯದರ್ಶಿ ಗಣಪತಿ ಕೋಲಿಬೇಣ, ದತ್ತಾತ್ರಯ ಕೋಲಿಬೇಣ, ವಿನಾಯಕ ಕವಾಳೆ ಹಾಗೂ ಅಭಿಯಾನ ಸಮಿತಿಯ ಸಂಚಾಲಕ ರಾಮಕೃಷ್ಣ ಕವಡಿಕೇರೆ, ಮಾಧ್ಯಮ ಸಂಚಾಲಕ ನರಸಿಂಹ ಸಾತೊಡ್ಡಿ, ಕಿಸಾನ್ ಕಾರ್ಯದರ್ಶಿ ಗೋಪಾಲಕೃಷ್ಣ ರಾ.ಭಟ್, ಪ್ರಮುಖರಾದ ಅನಂತ ಕಂಚಿಪಾಲ್, ರಾಮಚಂದ್ರ ಚಿಕ್ಯಾನಮನೆ, ಗಣಪತಿ ಬೋಳಗುಡ್ಡೆ, ದೇಮಣ್ಣ, ಸಿದ್ದಾರ್ಥ ನಂದೊಳ್ಳಿಮಠ, ಟಿ.ಎನ್.ಭಟ್ಟ ನಡಿಗೆಮನೆ ಇದ್ದರು.
ಭೂಸುಪೋಷಣೆ ಮತ್ತು ಸಂರಕ್ಷಣಾ ಸಮಿತಿಯ ಪ್ರಾಂತ ಸಂಚಾಲಕ ಗಣಪತಿ ಮೆಣಸುಮನೆ ಸ್ವಾಗತಿಸಿ ಪ್ರಾಸ್ತಾವಿಕಗೈದು ಅಭಿಯಾನದ ಉದ್ದೇಶಗಳನ್ನು ತಿಳಿಸಿದರು. ತಾಲೂಕಾ ಸಂಚಾಲಕ ವೆಂಕಟ್ರಮಣ ಬೆಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಇನ್ನೋರ್ವ ಸಂಚಾಲಕ ಕುಮಾರ ಭಟ್ಟ ಹಂಡ್ರಮನೆ ವಂದಿಸಿದರು.