ಯಲ್ಲಾಪುರ: ಪಟ್ಟಣದ ಉದ್ಯಮನಗರದ ಗೋಕುಲಂ ಇಂಡಸ್ಟ್ರಿಯನ್ನು ಸೀಜ್ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ಭೀಮಸೇನೆಯ ಜಿಲ್ಲಾ ಸಮಿತಿ ವತಿಯಿಂದ ತಹಸೀಲ್ದಾರ ಶ್ರೀಕೃಷ್ಣ ಕಾಮ್ಕರ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕಳೆದ ಸೆ.13 ರಂದು ಗೋಕುಲಂ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ ಕೃಷ್ಣಪ್ಪ ಕೊರವರ್ ಎಂಬ ಕಾರ್ಮಿಕನ ಮೇಲೆ ಬ್ರಹದಾಕಾರದ ಗೇಟ್ ಬಿದ್ದು, ಆತ ಸೊಂಟ ಹಾಗೂ ಕಾಲು ಸ್ವಾಧೀನ ಕಳೆದುಕೊಂಡಿದ್ದಾನೆ. ಯಾವುದೇ ಸುರಕ್ಷತಾ ಸಲಕರಣೆ ನೀಡದೇ ಕೆಲಸ ಮಾಡಿಸಿ, ನಿರ್ಲಕ್ಷ್ಯದಿಂದಾಗಿ ಘಟನೆಗೆ ಕಾರಣರಾದ ಇಂಡಸ್ಟ್ರಿ ಮಾಲೀಕ ಮುರಳಿ ನಾಯರ್ ವಿರುದ್ಧ ಕ್ರಮ ಆಗಬೇಕೆಂದು ಆಗ್ರಹಿಸಿದರು.
ಕುಟುಂಬದ ಆಧಾರ ಸ್ಥಂಭವಾಗಿದ್ದ ಗಾಯಾಳು ಕಾರ್ಮಿಕ ಮಂಜುನಾಥ ಇದೀಗ ಹಾಸಿಗೆಯಲ್ಲೇ ಮಲಗಿರುವ ಸ್ಥಿತಿ ಉಂಟಾಗಿದೆ. ಇಂಡಸ್ಟ್ರಿ ಮಾಲೀಕರು ಇತರ ಕಾರ್ಮಿಕರಿಗೂ ಮುಂಜಾಗ್ರತಾ ಸಲಕರಣೆ ನೀಡದೇ, ಪಿ.ಎಫ್, ಇಎಫ್, ವಿಮಾ ಸೌಲಭ್ಯ ಏನನ್ನೂ ನೀಡದೇ ಸಂಬಳವನ್ನು ನಗದು ರೂಪದಲ್ಲಿ ನೀಡುತ್ತಿದ್ದಾರೆ. ಕೈಗಾರಿಕೋದ್ಯಮದ ನಿಯಮಗಳನ್ನು ಪಾಲಿಸದೇ, ಕಾರ್ಮಿಕರ ಜೀವ, ಜೀವನದ ಜತೆ ಚೆಲ್ಲಾಟವಾಡುತ್ತಿದ್ದಾರೆ.
ಗೋಕುಲಂ ಇಂಡಸ್ಟ್ರಿಯನ್ನು ಸೀಜ್ ಮಾಡಿ, ಗಾಯಾಳು ಕಾರ್ಮಿಕನಿಗೆ ಇಂಡಸ್ಟ್ರಿಯವರೇ ಚಿಕಿತ್ಸಾ ವೆಚ್ಚ ಭರಿಸುವಂತೆ ಮಾಡಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಉಗ್ರ ಹೋರಾಟ ಅನಿವಾರ್ಯ ಎಂದು ಸಮಿತಿಯವರು ಎಚ್ಚರಿಸಿದರು.
ಸಮಿತಿಯ ಬೆಳಗಾವಿ ವಿಭಾಗೀಯ ಗೌರವಾಧ್ಯಕ್ಷ ಮಾರುತಿ ಬೋವಿವಡ್ಡರ್, ಜಿಲ್ಲಾಧ್ಯಕ್ಷ ಈರಣ್ಣ ವಡ್ಡರ್, ಉಪಾಧ್ಯಕ್ಷ ಹನುಮಂತ ಕೊರವರ್, ಕಾರ್ಯದರ್ಶಿ ಭರಮೋಜಿ ವಡ್ಡರ್, ಸದಸ್ಯ ರಾಜು ಮೇತ್ರಿ, ಯಲ್ಲಾಪುರ ತಾಲೂಕು ಅಧ್ಯಕ್ಷ ಅಶೋಕ ಕೊರವರ್, ಹಳಿಯಾಳ ತಾಲೂಕು ಅಧ್ಯಕ್ಷ ಮಾರುತಿ ಕಲಭಾವಿ, ಕಾರ್ಯದರ್ಶಿ ಮಾರುತಿ ಕುರಿಯಾರ, ಅಂಬೇಡ್ಕರ್ ಸೇವಾ ಸಂಘದ ಅಧ್ಯಕ್ಷ ಜಗನ್ನಾಥ ರೇವಣಕರ್, ಸಂಜುಕುಮಾರ ಜಾಧವ ಇತರರಿದ್ದರು.