ಅಂಕೋಲಾ: ತಾಲೂಕಿನ ಗಡಿ ಭಾಗವಾದ ಹೆಗ್ಗಾರ ಶ್ರೀ ಬಲಮುರಿ ಮಹಾಗಣಪತಿ ದೇವಸ್ಥಾನದಲ್ಲಿ ಅ.15 ರ ವಿಜಯ ದಶಮಿಯಂದು, ಇತ್ತೀಚೆಗೆ ಅಗಲಿದ ಹಿರಿಯ ಚೇತನ, ಹಿರಿಯ ತಾಳಮದ್ದಳೆ ಕಲಾವಿದ ಎಸ್.ಎಂ ವೈದ್ಯ, ವೈದ್ಯಹೆಗ್ಗಾರ ರವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
ಊರಿನ ನಾಗರಿಕರು ಹಮ್ಮಿಕೊಂಡ ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಹಿರಿಯ ತಾಳಮದ್ದಳೆ ಕಲಾವಿದರಾದ ವೆಂಕಟ್ರಮಣ ಭಟ್, ಗುರುಜೀಮನೆ ರವರು ಮಾತನಾಡಿ, ಈ ಭಾಗದ ತಾಳಮದ್ದಳೆಯ ಮೇರು ಕಲಾವಿದನನ್ನು ಕಳೆದುಕೊಂಡಿದ್ದೇವೆ, ಅನಾದಿಯಿಂದಲೂ ಎಸ್.ಎಂ ವೈದ್ಯ ರವರ ಮನೆಯಲ್ಲಿ ನಡೆಯುತ್ತಿದ್ದ ಅನಂತನೋಪಿ ತಾಳಮದ್ದಳೆಯಲ್ಲಿ ಅನೇಕ ಸಲ ಭಾಗವಹಿಸಿದ್ದೇನೆ, ಅನೇಕ ಕಿರಿಯ ಕಲಾವಿದರಿಗೆ ಮಾರ್ಗದರ್ಶಕರಾಗಿ ಎಸ್.ಎಂ ವೈದ್ಯ ರವರು ಕೆಲಸ ಮಾಡಿದ್ದರು. ಎಂದಿಗೂ ಸಹಾ ಪದ್ಯದ ಚೌಕಟ್ಟನ್ನು ಮೀರದೇ ಅರ್ಥ ಹೇಳುವುದು ಹಾಗೂ ಅದರಲ್ಲೇ ಸೂಕ್ಷ್ಮವನ್ನು ತಿಳಿಸುವುದು ಎಸ್.ಎಂ ವೈದ್ಯರ ವಿಶಿಷ್ಟತೆಯಾಗಿತ್ತು, ಈ ಭಾಗ ಸಾಂಸ್ಕೃತಿಕವಾಗಿ ಮುನ್ನಡೆಯಲು ಎಸ್.ಎಂ ವೈದ್ಯರ ಕೊಡುಗೆ ಅಪಾರ ಎಂದರು.
ಹಿರಿಯ ಹಾಗು ಹಳೆ ಮಟ್ಟಿನ ಯಕ್ಷಗಾನ ಭಾಗವತರಾದ ಪ್ರಭಾಕರ ಕಲಗಾರೆ ಮಾತನಾಡಿ ಯಕ್ಷಗಾನ ರಂಗದ ಹಿರಿಯ ಕೊಂಡಿ ಕಳಚಿದೆ, ಅನೇಕ ಕಲಾವಿದರಿಗೆ ಆಶ್ರಯ ನೀಡಿ, ಕಲಾ ಪೆÇ್ರೀತ್ಸಾಹಕ್ಕೆ ನೆರವಾದ ಎಸ್.ಎಂ ವೈದ್ಯರು ಇನ್ನಿಲ್ಲವೆಂಬುದು ಕಲಾ ಪ್ರಪಂಚಕ್ಕೇ ಹಾನಿ ಎಂದು ಶೋಕ ವ್ಯಕ್ತಪಡಿಸಿದರು. ಮೃತರ ಗೌರವಾರ್ಥ ಒಂದು ನಿಮಿಷದ ಮೌನವನ್ನು ಆಚರಣೆ ಮಾಡಲಾಯಿತು. ಅದೇ ರೀತಿ ತಾಳಮದ್ದಳೆ ಕಲಾವಿದರಾಗಿದ್ದ ಎಸ್.ಎಂ ವೈದ್ಯರಿಗೆ ಅರ್ಪಣೆಯಾಗಿ ಶ್ರೀ ರಾಮನಿರ್ಯಾಣ ತಾಳಮದ್ದಳೆಯನ್ನು ಹಮ್ಮಿಕೊಳ್ಳಲಾಗಿತ್ತು.
ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಭಾಕರ ಕಲಗಾರೆ, ಮದ್ದಲೆಯಲ್ಲಿ ಅಶೋಕ ಗಾಂವ್ಕರ ಸಹಕರಿಸಿದರು. ಮುಮ್ಮೇಳದಲ್ಲಿ ಕಲಾವಿದರಾಗಿ ವೆಂಕಟ್ರಮಣ ಭಟ್, ವಿಶ್ವೇಶ್ವರ ಭಟ್, ರಾಮಕೃಷ್ಣ ಎಂ ಭಟ್, ಶಿವರಾಂ ಎನ್ ಭಟ್ಟ ಗುಡ್ಡೆ, ಕಮಲಾಕರ ಭಟ್ಟ ಗುಡ್ಡೆ, ಅನಂತ ವೆಂ ಗಾಂವ್ಕರ ಭಾಗವಹಿಸಿದ್ದರು. ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ನಾರಾಯಣ ಭಟ್ ಹಾಗು ಅರ್ಚಕರಾದ ಗೋಪಾಲಕೃಷ್ಣ ಭಟ್ ಭಾಗವಹಿಸಿದ್ದರು. ಸ್ಥಳೀಯ ನಾಗರಿಕರು ಹಾಗೂ ಯುವಕ ಸಂಘ ಸಂಘಟನೆಯಲ್ಲಿ ಸಹಕರಿಸಿದ್ದರು