Slide
Slide
Slide
previous arrow
next arrow

ಅಧರ್ಮದ ವಿರುದ್ಧ ಧರ್ಮ ಜಯ ಸಾಧಿಸಿದ ದಿನವೇ ವಿಜಯ ದಶಮಿ; ಆಚರಣೆ ಹಿನ್ನೆಲೆ, ಮಹತ್ವ ಇಲ್ಲಿದೆ ನೋಡಿ..

300x250 AD


ನವರಾತ್ರಿ ವಿಶೇಷ: ದುರ್ಗಾದೇವಿಯನ್ನು ಆರಾಧಿಸುವ ಹಬ್ಬವೇ ನವರಾತ್ರಿ. ಒಂಭತ್ತು ದಿನಗಳ ಕಾಲ ಭಾರತದಾದ್ಯಂತ ನಡೆಯುವ ಹಬ್ಬ ಇದಾಗಿದ್ದು, ಕರ್ನಾಟಕದಲ್ಲಿ ನವರಾತ್ರಿಯನ್ನು ದಸಾರವೆಂದು ಕರೆಯುತ್ತಾರೆ.


ನವರಾತ್ರಿಯ ಹಿನ್ನಲೆ: ನವರಾತ್ರಿಯೆಂದರೆ ಒಂಭತ್ತು ದಿನಗಳಿಗೆ ಸೀಮಿತ ವಾಗಿದ್ದರೂ ಹತ್ತನೇ ದಿನ ವಿಜಯದಶಮಿ. ಮಹಾದುರ್ಗೆ ರಾಕ್ಷಸರನ್ನು ಸಂಹರಿಸಿ ವಿಜಯವನ್ನು ಸಾಧಿಸಿದ ದಿನ. ತ್ರೇತಾಯುಗದಲ್ಲಿ ಶ್ರೀರಾಮನು ರಾವಣನನ್ನು ಸಂಹಾರ ಮಾಡಿದನು. ಅದು ವಿಜಯದಶಮಿಯ ದಿನ ಎಂಬ ನಂಬಿಕೆ ಇದೆ.

ಮಹಿಷಾಸುರನ ನಾಶಕ್ಕಾಗಿ ಅವತಾರ ತಾಳಿದ ಶ್ರೀ ದೇವಿಯ ಉತ್ಸವ ಎಂದರೆ ನವರಾತ್ರಿ. ನವರಾತ್ರಿಯಲ್ಲಿ ಶ್ರೀ ದೇವಿಯ ಉಪಾಸನೆಯನ್ನು ಭಕ್ತಿ ಶ್ರದ್ಧೆಯಿಟ್ಟು ಮಾಡುವುದರಿಂದ ದೇವಿತತ್ತ್ವದ ಲಾಭವಾಗುತ್ತದೆ. ರಾಮನಿಂದ ರಾವಣನ ವಧೆಯಾಗಬೇಕೆಂದು ನಾರದರು ರಾಮನಿಗೆ ಶರವನ್ನರಾತ್ರಿ ವ್ರತವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಪೂರ್ಣಗೊಳಿಸಿದ ನಂತರ ರಾಮನು ಲಂಕೆಯ ಮೇಲೆ ಆಕ್ರಮಣ ಮಾಡಿ ಯುದ್ಧದಲ್ಲಿ ರಾವಣನನ್ನು ವಧಿಸಿದನು.

ಪರಶಿವನ ಪತ್ನಿಯಾದ ದುರ್ಗಾಮಾತೆಯು ಅತ್ಯಂತ ಶಕ್ತಿಶಾಲಿಯಾದ ದೇವತೆಯಾಗಿದ್ದು, ಆದಿಶಕ್ತಿ ಎಂದು ಕರೆಯಲ್ಪಡುತ್ತಾಳೆ. ಆದಿ ಶಕ್ತಿಯನ್ನು ಕಾಳಿ, ಪಾರ್ವತಿ, ಗೌರಿ, ಸತಿ, ಮಹಾಮಾಯೆ ಹಾಗೂ ಮಹಿಷಾಸುರ ಮರ್ದಿನಿ ಮುಂತಾದ ವಿವಿಧ ರೂಪಗಳಲ್ಲಿ ಆರಾಧಿಸಲಾಗುತ್ತದೆ. ಪುರಾಣಗಳಲ್ಲಿ ಹೇಳುವಂತೆ, ಮಹಿಷಾಸುರನೆಂಬ ಎಮ್ಮೆ ರೂಪದ ಅಸುರನು ತನ್ನ ಸೈನ್ಯದೊಂದಿಗೆ ದೇವಲೋಕಕ್ಕೆ ದಾಳಿ ಮಾಡಿ, ದೇವತೆಗಳನ್ನು ಹೊರಗೆ ಅಟ್ಟಿದನಂತೆ. ಆಗ ದೇವತೆಗಳೆಲ್ಲರೂ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಕಾಪಾಡುವಂತೆ ಕೇಳಿಕೊಂಡಾಗ, ಮೂರು ತ್ರಿಮೂರ್ತಿಗಳೂ ತಮ್ಮ ದೇಹದ ಶಕ್ತಿಯನ್ನೆಲ್ಲ ಸೇರಿಸಿ, ದೇವತೆಯನ್ನು ಸೃಷ್ಟಿಸಿದರು. ಎಲ್ಲಾ ದೇವರ ಶಕ್ತಿಯು ಸೇರಿ ದೇವಿಯು ದುರ್ಗೆಯ ಅವತಾರವೆತ್ತಿದಳು. ಶಕ್ತಿಗಳ ಸಂಗಮದಿಂದ ಆದ ದುರ್ಗಾ ದೇವಿಯ ಅವತಾರದಲ್ಲಿ ದೇವಿಯು 10 ಕೈಗಳನ್ನು ಹೊಂದಿರುವ ಸುಂದರವಾದ ಸ್ತ್ರೀಯಾಗಿ ಹುಟ್ಟಿದ ನಂತರ ದೇವತೆಗಳೆಲ್ಲ ಆಕೆಗೆ ಉಡುಗೊರೆಯನ್ನು ನೀಡಿದರು.

300x250 AD

ಈಶ್ವರನು ತ್ರಿಶೂಲವನ್ನು, ವಿಷ್ಣುವು ಚಕ್ರವನ್ನು, ವರುಣ ದೇವನು ಪಾಶವನ್ನು, ಇಂದ್ರನು ವಜ್ರಾಯುಧವನ್ನು ಹಾಗೂ ವಾಯುವು ಬಾಣಗಳನ್ನು ದುರ್ಗೆಗೆ ನೀಡಿದರು. ವಸ್ತ್ರಗಳನ್ನು ಮತ್ತು ವಾಹನವಾದ ಸಿಂಹವನ್ನು ಪರ್ವತಗಳ ರಾಜ ಹಿಮವಂತನು ನೀಡಿದನು. ಎಲ್ಲಾ ಆಯುಧಗಳಿಂದ ಸನ್ನದ್ಧಳಾದ ದೇವಿಯು ಯುದ್ಧಕ್ಕೆ ಸಿದ್ಧಳಾಗಿ ಅಸುರ ಸೈನ್ಯದ ಮೇಲೆ ಆಕ್ರಮಣ ಮಾಡಿದಳು. ಒಂಭತ್ತು ದಿನಗಳ ಕಾಲ ನಡೆದ ಈ ಯುದ್ಧದಲ್ಲಿ ಮಹಿಷಾಸುರನನ್ನು ದೇವಿಯು ತನ್ನ ಸಿಂಹ ಹಾಗೂ ಆಯುಧಗಳ ಸಹಾಯದಿಂದ ಸಂಹರಿಸಿದಳು. ದುರ್ಗೆಯು ಮಹಿಷಾಸುರನನ್ನು ವಧಿಸಿದ ದಿನವೇ ವಿಜಯ ದಶಮಿ.

ವಿಜಯದಶಮಿಯ ಇತಿಹಾಸ ಮತ್ತು ಮಹತ್ವ:
ವಿಜಯದಶಮಿ ಎಂದರೆ ಕೆಟ್ಟದ್ದರ ಮೇಲೆ ಒಳ್ಳೆಯತನದ ಗೆಲುವು. ಹಿಂದೂ ಪುರಾಣದ ಪ್ರಕಾರ, ಮಹಿಷಾಸುರ ಮೂರು ಲೋಕಗಳಲ್ಲಿ ವಿನಾಶವನ್ನು ಮಾಡಲು ಪ್ರಾರಂಭಿಸಿ, ದೇವರುಗಳನ್ನೂ ಭಯಭೀತಗೊಳಿಸಿದನು. ಆಗ ದುರ್ಗಾ ದೇವಿಯು ಅವರ ರಕ್ಷಣೆಗೆ ಬಂದಳು. ಅವಳು ರಾಕ್ಷಸನನ್ನು ಕೊಲ್ಲುವುದಾಗು ಸವಾಲು ಹಾಕಿ ಒಂಬತ್ತು ದಿನಗಳ ಸುದೀರ್ಘ ಯುದ್ಧದಲ್ಲಿ ಅವನೊಂದಿಗೆ ಹೋರಾಡಿದಳು, ಅಂತಿಮವಾಗಿ ಹತ್ತನೇ ದಿನದಂದು ಶಕ್ತಿಯುತ ಅಸುರನನ್ನು ಸಂಹರಿಸಿದಳು. ಇದಕ್ಕಾಗಿಯೇ ನವರಾತ್ರಿ ಹಬ್ಬದಲ್ಲಿ ದುರ್ಗಾ ದೇವಿಯ 9 ಅವತಾರವನ್ನು 9 ದಿನಗಳವರೆಗೆ ಪೂಜಿಸಲಾಗುತ್ತದೆ. ಹತ್ತನೇ ದಿನ ದುರ್ಗಾ ಪೂಜೆ ಆಚರಣೆಯೊಂದಿಗೆ ಮುಕ್ತಾಯವಾಗುತ್ತದೆ.
ಇನ್ನೂ ಇನ್ನೊಂದು ಪುರಾಣದ ಪ್ರಕಾರ, ರಾಮನು ಅಶ್ವಿನ ಮಾಸದ ವೇಳೆ ಸಮುದ್ರ ತಟದಲ್ಲಿ ಕುಳಿತು ದುರ್ಗಾ ದೇವಿಯ ಹೊಸ ರೂಪಗಳನ್ನು ಪೂಜಿಸಲು ಆರಂಭಿಸಿದನು. ಚಂಡಿ ಪೂಜೆ ಇದರಲ್ಲಿ ಅತ್ಯಂತ ವಿಶೇಷವಾಗಿತ್ತು. ಮರ್ಯಾದಾ ಪುರುಷೋತ್ತಮ ಶ್ರೀರಾಮನು ಲಂಕೆಯನ್ನು ವಶಪಡಿಸಿಕೊಳ್ಳುವ ಆಕಾಂಕ್ಷೆಯಿಂದ 9 ದಿನಗಳ ಕಾಲ ನಿರಂತರವಾಗಿ ಶಕ್ತಿ ದೇವತೆಯನ್ನು ಪೂಜಿಸುತ್ತಿದ್ದನು. ಆತನ ಪೂಜೆಯಿಂದ ಸಂತೋಷಗೊಂಡ ದುರ್ಗಾ ದೇವಿಯು 9 ನೇ ದಿನದಂದು ಭಗವಾನ್ ರಾಮನಿಗೆ ವಿಜಯವನ್ನು ಅನುಗ್ರಹಿಸುತ್ತಾಳೆ. ದುರ್ಗೆಯ ಅನುಗ್ರಹದಿಂದ ರಾಮನು ಹತ್ತನೇ ದಿನ ಲಂಕೆಯನ್ನು ತಲುಪಿ ರಾವಣನನ್ನು ಕೊಂದನು. ಅಂದಿನಿಂದ ನವರಾತ್ರಿ ಪೂಜೆಯ ನಂತರ ಹತ್ತನೇ ದಿನ, ಅಧರ್ಮದ ವಿರುದ್ಧ ಧರ್ಮವು ಜಯ ಸಾಧಿಸಿರುವ ದಿನವೆಂದು ಆಚರಿಸಲಾಗುತ್ತದೆ. ಈ ದಿನವನ್ನೇ ವಿಜಯದಶಮಿ ಎನ್ನಲಾಗುತ್ತದೆ.

Share This
300x250 AD
300x250 AD
300x250 AD
Back to top