ಲಾಂಗೂಲಚಾಲನಮಧಶ್ಚರಣಾವಪಾತಂ
ಭೂಮೌ ನಿಪತ್ಯ ವದನೋದರದರ್ಶನಂ ಚ |
ಶ್ವಾ ಪಿಂಡದಸ್ಯ ಕುರುತೇ ಗಜಪುಂಗವಸ್ತು
ಧೀರಂ ವಿಲೋಕಯತಿ ಚಾಟುಶತೈಶ್ಚ ಭುಂಕ್ತೇ ||
ನಾಯಿಯೊಂದು ಯಾಕೆ ನಾಯಿಪಿಂಡವೆಂದು ಮತ್ತು ಆನೆಯೊಂದು ಯಾಕೆ ಗಜೇಂದ್ರನೆಂದು ಕರೆಸಿಕೊಳ್ಳುತ್ತದೆ ಎಂಬುದಕ್ಕೆ ಈ ಶ್ಲೋಕದಲ್ಲಿ ವಿವರಣೆಯಿದೆ. ಬಾಲ ಅಲ್ಲಾಡಿಸುತ್ತ ಕಾಲಿನ ಬುಡಕ್ಕೆಬೀಳುವುದು, ಭೂಮಿಯ ಮೇಲೆ ಹೊರಳಾಡಿ ಮುಖವನ್ನೂ ಹೊಟ್ಟೆಯನ್ನೂ ತೋರಿಸುವುದು, ಕುಯ್ಗುಡುತ್ತ ಹಿಂದೋಡಿ ಬರುವುದು ಇವೆಲ್ಲ ನಾಯಿಯ ಸ್ವಭಾವಗಳು. ಮನುಷ್ಯನಿದ್ದಲ್ಲಿ ಆಹಾರ ಸಿಗುತ್ತದೆ ಅನ್ನುವುದನ್ನು ನಾಗರೀಕತೆಯ ಬೆಳವಣಿಗೆಯ ಜೊತೆಗೆ ಅರ್ಥಮಾಡಿಕೊಂಡ ನಾಯಿಯು ಸರ್ವದಾ ತನ್ನ ದಾಸ್ಯವನ್ನೂ, ತನ್ನ ದೀನತೆಯನ್ನೂ, ಅಸಹಾಯಕತೆಯನ್ನೂ ತೋರಿಸುತ್ತ ಬದುಕುತ್ತದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಆನೆಯೊಂದು ಯಾವತ್ತೂ ಆಹಾರಕ್ಕಾಗಿ ಮನುಷ್ಯನಲ್ಲಿ ದೀನವಾಗುವುದಿಲ್ಲ. ಹಸಿವೇ ಆಗಿದ್ದರೂ ಅದು ಧೀರನಿಲುವಿನಿಂದ ನೋಟವನ್ನು ಹರಿಸುತ್ತದೆ, ಅಷ್ಟಲ್ಲದೇ ಹತ್ತಿರಕ್ಕೆ ಬಂದು ಮೈನೀವಿ, ಸಮಾಧಾನಗೊಳಿಸಿ, ಲಲ್ಲೆಗರೆದಬಳಿಕವಷ್ಟೇ ಆಹಾರವನ್ನು ಸೇವಿಸುತ್ತದೆ. ಹಾಗಾಗಿ ದೀನತೆಯನ್ನು ಆಡಿಕೊಂಡು ಬೈಯುವಾಗ ನಾಯಿ ಎಂದು ಬೈಯುವರೇ ವಿನಾ ಆನೆ ಎಂದಲ್ಲ.
ಶ್ರೀ ನವೀನ ಗಂಗೋತ್ರಿ